ಹೊಸಪೇಟೆ (ವಿಜಯನಗರ): ನಗರದ ಮರುಳ ಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ರೇಣುಕಾಚಾರ್ಯರ ಜಯಂತಿ ಶುಕ್ರವಾರ ಆಚರಿಸಲಾಯಿತು.
ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪಾರ್ಚನೆ ಮಾಡಿದರು. ಬಳಿಕ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿದರು.
ಬಳಿಕ ಮಾತನಾಡಿದ ರಾಣಿ ಸಂಯುಕ್ತಾ, ‘ಯಾವುದೇ ಸಂಘಟನೆಯಲ್ಲಿ ಮಹಿಳೆಯರ ಶಕ್ತಿ ಹೆಚ್ಚಾದಷ್ಟು ಸಂಘಟನೆಯ ಏಳಿಗೆಯಾಗುತ್ತದೆ. ಮಹಿಳಾ ಸದಸ್ಯರು ಸಂಖ್ಯೆ ಹೆಚ್ಚಾಗಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.
‘ಮನುಷ್ಯರು ಮಹಾದೇವರಾಗುವ ಮಾರ್ಗವನ್ನು ಹಾಕಿಕೊಟ್ಟವರಲ್ಲಿ ರೇಣುಕಾಚಾರ್ಯ ಮೊದಲಿಗರು. ಸಾಮಾಜಿಕ, ಲಿಂಗ ಸಮಾನತೆಗೆ ಹೆಚ್ಚಿನ ಮನ್ನಣೆ ನೀಡಿ ಅದನ್ನು ಸರ್ವರೂ ಅನುಸರಿಸುವಂತೆ ಕರೆಕೊಟ್ಟಿದ್ದರು. ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದು’ ಎಂದರು.
ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾ ಅಧ್ಯಕ್ಷೆ ಕೆ.ಸುಮಾ, ತಾಲ್ಲೂಕು ಅಧ್ಯಕ್ಷೆ ಡಿ.ಶಶಿಕಲಾ, ಗಿರಿಜಾ ಇದ್ದರು.