ಹೂವಿನಹಡಗಲಿ: ಆಸ್ತಿ ಹಂಚಿಕೆ ವಿಚಾರವಾಗಿ ಒಂಬತ್ತು ವರ್ಷಗಳ ಹಿಂದೆ ಹೆತ್ತ ತಾಯಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಗುರುವಾರ ಆತನ ಸಹೋದರನೇ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ಅಲ್ಲಿಪುರ ಗ್ರಾಮದಲ್ಲಿ ಜರುಗಿದೆ.
ಕುರಿ ಶಿವಪ್ಪ (39) ಕೊಲೆಯಾದವರು. ಈತನ ಕಿರಿಯ ಸಹೋದರ ಕುರಿ ಪಕ್ಕಿರೇಶ (37) ಕೊಲೆ ಆರೋಪಿ. ಜಮೀನು ಮಾರಾಟದಿಂದ ಬಂದ ಹಣ ಹಂಚಿಕೆ ವಿಚಾರವಾಗಿ ಸಹೋದರರ ನಡುವೆ ಜಗಳ ಉಂಟಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪಕ್ಕಿರೇಶ ತನ್ನ ಅಣ್ಣನ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆಸ್ತಿಗಳನ್ನು ಸಮನಾಗಿ ಹಂಚಿಕೆ ಮಾಡಿಲ್ಲ ಎಂದು ಈಗ ಕೊಲೆಯಾಗಿರುವ ಶಿವಪ್ಪ 9 ವರ್ಷಗಳ ಹಿಂದೆ ತನ್ನ ತಾಯಿ ಸೋಮವ್ವಳನ್ನುಕೊಲೆ ಮಾಡಿ ಜೈಲು ಸೇರಿದ್ದ. ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಸಹೋದರನ ಮನೆಯಲ್ಲೇ ವಾಸವಾಗಿದ್ದ.
ಇಂದು ಬೆಳಿಗ್ಗೆ ಮತ್ತೆ ಆಸ್ತಿ ವಿಚಾರವಾಗಿ ಸಹೋದರರ ನಡುವೆ ಏರ್ಪಟ್ಟ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿ ಪಕ್ಕಿರೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಸಿಪಿಐ ರಮೇಶ ಕುಲಕರ್ಣಿ, ಪಿಎಸ್ಐ ದಾದಾವಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.