ಹೊಸಪೇಟೆ (ವಿಜಯನಗರ): ವಾಂತಿಭೇದಿಯಿಂದ ನಲುಗಿದ ನಗರದ ಕಾರಿಗನೂರಿನ ಶಿಕಾರಿ ಕ್ಯಾಂಪ್ ಪ್ರದೇಶಕ್ಕೆ ಭಾನುವಾರ ನಗರಸಭೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದ್ದು, ಜನ ಸರದಿಯಲ್ಲಿ ನಿಂತು ನೀರು ಹಿಡಿದುಕೊಂಡರು.
ಈ ಒಂದು ಪ್ರದೇಶದಲ್ಲಿ ಮಾತ್ರ ವಾಂತಿಭೇದಿ ಕಾಣಿಸಿಕೊಂಡಿದ್ದು, ಕಲುಷಿತ ನೀರು ಸೇವನೆಯಿಂದಲೇ ಅದು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಈ ಮಧ್ಯೆ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಟಿ.ಬಿ.ಡ್ಯಾಂ ಪ್ರದೇಶದಲ್ಲಿರುವ ನಗರಸಭೆಯಿಂದ ನಿರ್ವಹಿಸಲಾಗುತ್ತಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
14 ಮಂದಿಗೆ ಚಿಕಿತ್ಸೆ: ವಾಂತಿಭೇದಿಯಿಂದ ಅಸ್ವಸ್ಥಗೊಂಡಿರುವ 14 ಮಂದಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. ಶುಕ್ರವಾರ ಎಂಟು ಮಂದಿ ಹಾಗೂ ಶನಿವಾರ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.