ಅರಸೀಕೆರೆ ( ವಿಜಯನಗರ ಜಿಲ್ಲೆ): ಹೋಬಳಿಯ ಕಮ್ಮತ್ತಹಳ್ಳಿ ಗ್ರಾಮದ ಪುರಾತನ ಬಾವಿ ಪುನಶ್ಚೇತನ ಮಾಡುವ ವೇಳೆ ದೇವರ ಕೇಲುಗಳು (ದೇವರ ಪೂಜೆ ಸಾಮಗ್ರಿಗಳುಳ್ಳ ಮಡಿಕೆ), ಶಿವಲಿಂಗ, ಬಸವಣ್ಣ ಮೂರ್ತಿಗಳು ಪತ್ತೆಯಾಗಿವೆ. ಕೇಲುಗಳನ್ನು ಮುಚ್ಚಲಾಗಿದ್ದು, ಒಳಗಡೆ ಏನಿದೆ ಎಂಬುದು ತಿಳಿದಿಲ್ಲ.
500 ವರ್ಷಗಳ ಹಳೆಯ ಬಾವಿಯನ್ನು ಪುಣಭಗಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತರಿ ಯೋಜನೆಯಡಿ ಪುನಶ್ಚೇತನ ಮಾಡಲಾಗುತ್ತಿದೆ. ಕಲ್ಲು, ಜಾಲಿಯಲ್ಲಿ ಮುಚ್ಚಿಹೋಗಿದ್ದ ಬಾವಿಯ ಪುನಶ್ಚೇತನಕ್ಕೆ ಮೊದಲ ಹಂತದಲ್ಲಿ ₹5 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಸಿ ಪುಷ್ಕರಣಿ ರೂಪ ನೀಡಲಾಗಿದೆ. ಮುಂದುವರಿದ ಕಾಮಗಾರಿಗೆ ₹3 ಲಕ್ಷ ವೆಚ್ಚದಲ್ಲಿ ಬಾವಿ ಹೂಳು ತೆಗೆಸಲಾಗಿದೆ.
ಕ್ರಿ.ಶ 1784ರ ಸಮಯದಲ್ಲಿ ಹರಪನಹಳ್ಳಿ-ಉಚ್ಚಂಗಿದುರ್ಗವನ್ನು ಚಿತ್ರದುರ್ಗದ ಮೂಲ ಪುರುಷ ಚಿತ್ರನಾಯಕ, ಹರಪನಹಳ್ಳಿ ಸೋಮಶೇಖರ ಆಳ್ವಿಕೆ ನಡೆಸಿದ್ದಾರೆ. ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ರೈತರಿಗೆ ಕಮ್ಮತ್ತದಿಂದ ನೀಡಿದ್ದರು. ರೈತರ ಉಪಯೋಗಕ್ಕೆ ಬಾವಿಯನ್ನು ಕೊರೆಯಿಸಲಾಗಿದೆ. ಅಂದಿನ ಕಮ್ಮತ್ತವು ಇಂದು ಕಮ್ಮತ್ತಹಳ್ಳಿ ಆಗಿದೆ ಎನ್ನುತ್ತಾರೆ ಗ್ರಾಮಸ್ಥರು.
‘ಪುರಾತನ ಬಾವಿಗೆ ಪುಷ್ಕರಣಿಯ ಸ್ಪರ್ಶ ನೀಡಲಾಗಿದೆ. ಇಲ್ಲಿ ದೊರಕಿರುವ ಪ್ರಾಚೀನ ಕಾಲದ ಸಾಮಗ್ರಿಗಳು ಧಾರ್ಮಿಕ ನಂಬಿಕೆಗೆಗಳನ್ನು ಜೀವಂತವಾಗಿಸಿದೆ. ಈ ಕುರಿತು ಅಧ್ಯಯನ ನಡೆಯಬೇಕು. ಅವುಗಳ ರಕ್ಷಣೆಗೆ ಆಗಬೇಕು’ ಎಂದು ಗ್ರಾಮಸ್ಥರಾದ ಶ್ರೀನಿವಾಸ ನಾಯಕ, ತಿಪ್ಪೇಶಪ್ಪ ಒತ್ತಾಯಿಸಿದ್ದಾರೆ.
ಅರಸೀಕೆರೆ ಹೋಬಳಿಯ ಕಮ್ಮತ್ತಹಳ್ಳಿಯ ಪುರಾತನ ಬಾವಿಯಲ್ಲಿ ಪತ್ತೆಯಾದ ದೇವರ ಕೇಲುಗಳು