ವಿಜಯಪುರ: ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುವಂತೆ ರಸ್ತೆಗಳ ನಿರ್ಮಾಣ ಹಾಗೂ ಸುಸಜ್ಜಿತ ಹೋಟೆಲ್ಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಹೇಳಿದರು.
ಐತಿಹಾಸಿಕ ಕುಮಟಗಿ ವಾಟರ್ ಪೆವಿಲಿಯನ್ ಪ್ರವಾಸಿ ತಾಣದಲ್ಲಿ ಸೋಮವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಹೆರಿಟೇಜ್ ವಾಕ್ ಕಾರ್ಯಕ್ರಮ ಕೈಗೊಂಡು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ, ಸ್ಮಾರಕದ ಸ್ವಚ್ಛತೆ, ಅಲ್ಲಿನ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಿಜಯಪುರದ ಹಲವಾರು ಕಡೆ ಸುರಂಗ ಮಾರ್ಗಗಳಿದ್ದು, ಕನಿಷ್ಠ 100 ಮೀಟರ್ ಸುರಂಗ ಮಾರ್ಗಗಳನ್ನು ಸ್ವಚ್ಛಗೊಳಿಸಿ ಪ್ರವಾಸಿಗರು ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಪ್ರವಾಸಿಗರ ಆಕರ್ಷಣೆಗಾಗಿ ನಗರದ ಮುಖ್ಯ ರಸ್ತೆಗಳ ಪಕ್ಕದಲ್ಲಿರುವ ಅಂಗಡಿ, ಮಳಿಗೆಗಳಿಗೆ ಹಾಗೂ ಪಾದಚಾರಿ ಮಾರ್ಗಗಿಗೆ, ಕಂಪೌಂಡ್ ಗೋಡೆಗಳಿಗೆ ಬಣ್ಣ ಹಾಗೂ ಕಲಾಕೃತಿಗಳ ಚಿತ್ರಗಳನ್ನು ಮುಂದಿನ ದಿನಗಳಲ್ಲಿ ಚಿತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲೆಯ ‘ಅತ್ಯುತ್ತಮ ಪ್ರವಾಸಿ ಮಿತ್ರ’ ಮತ್ತು ‘ಅತ್ಯುತ್ತಮ ಪ್ರವಾಸಿ ಮಾರ್ಗದರ್ಶಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ, ವಿಜಯಪುರ ತಹಶೀಲ್ದಾರ್ ಸಿದ್ದರಾಯ ಬೋಸಗಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಪೀಟರ್ ಅಲೆಕ್ಸಾಂಡರ್, ಇಗ್ನೋ ಪ್ರಾದೇಶಿಕ ನಿರ್ದೇಕ ವರದರಾಜನ್, ಅಮೀನ್ ಹುಲ್ಲೂರು, ಅಂಬಾದಾಸ ಜೋಶಿ ಇದ್ದರು.