ವಿಜಯಪುರ: ‘ಜಗತ್ತಿನ ಜನರಿಗೆ ಇಂದು ಶಾಂತಿ ಬೇಕಾಗಿದೆ. ಅದು ಭಗವಾನ್ ಬುದ್ಧನ ಬೋಧನೆಗಳ ಪಾಲನೆಯಿಂದ ಮಾತ್ರ ಸಾಧ್ಯ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
ನಗರದ ಸಿಎಂಸಿ ಕಾಲೊನಿಯ ಅನಿಲ್ ಹೊಸಮನಿ ಅವರ ನಿವಾಸದಲ್ಲಿ ಬುದ್ಧ ವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಶ್ವದೆಲ್ಲೆಡೆ ಇಂದು ಯುದ್ಧ ಭೀತಿ ಆವರಿಸಿದೆ. ಭಯೋತ್ಪಾದನೆ ಹೆಸರಿನಲ್ಲಿ ಸಮಾಜದಲ್ಲಿ ಅರಾಜಕತೆ ತಾಂಡವ ಆಡುತ್ತಿದ್ದು, ಅಶಾಂತಿಯ ವಾತಾವರಣ ಸೃಷ್ಟಿ ಆಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.
‘ಚಂದ್ರಶೇಖರ ಹೊಸಮನಿ ಅವರು 50 ವರ್ಷಗಳ ಹಿಂದೆ ಪ್ರಕಟಿಸಿದ್ದ ‘ಬೌದ್ಧ ವಿಧಿ ದೀಪ’ ಕೃತಿ ಮರುಮುದ್ರಣ ಕಾಣುತ್ತಿರುವುದು ಸ್ವಾಗತಾರ್ಹ. ಸಜ್ಜನ ರಾಜಕಾಣಿ, ಪ್ರಬುದ್ಧ ಲೇಖಕ ಮತ್ತು ಪತ್ರಕರ್ತ, ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರಾಗಿದ್ದ ದಿ. ಚಂದ್ರಶೇಖರ ಹೊಸಮನಿ ಅವರ ವಿಚಾರಗಳು ಹೊಸ ಪೀಳಿಗೆಗೆ ದಾರಿದೀಪವಾಗಿವೆ’ ಎಂದು ತಿಳಿಸಿದರು.
ಬುದ್ಧನ ತತ್ವ ಸಿದ್ಧಾಂತಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸೊಲ್ಲಾಪುರದ ಕೆ.ಎಂ.ಕಾಂಬಳೆ, ವಿಜಯಪುರದ ಸಂತೋಷ ಶಹಾಪುರ, ವೆಂಕಟೇಶ ವಗ್ಯಾನವರ, ನಾಗರಾಜ ಲಂಬು, ಪರಶುರಾಮ ಲಂಬು ದಂಪತಿ ಹಾಗೂ ಲೇಖಕ ಎನ್.ಬಿ.ರೋಡಗಿ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ ಕಳ್ಳಿಮನಿ, ರಾಜಶೇಖರ ಯಡಹಳ್ಳಿ, ಶಶಿಕಾಂತ ಹೊನವಾಡಕರ, ಚಿದಾನಂದ ನಿಂಬಾಳಕರ, ಬಿ.ಸಿ.ಗೋವರ್ಧನ, ಮಿಲಿಂದ ಚಂಚಲಕರ ಇದ್ದರು.
ಅನಿಲ ಹೊಸಮನಿ, ಶಾರದಾ ಹೊಸಮನಿ ಅವರು ಮುಂದಿನ ಹುಣ್ಣಿಮೆಯ ‘ಧಮ್ಮ ದೀಪ’ವನ್ನು ಸಾಬು ಚಲವಾದಿ, ಸುಲೋಚನಾ ಚಲವಾದಿ ಅವರಿಗೆ ಹಸ್ತಾಂತರಿಸಿದರು.