ವಿಜಯಪುರ: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನ ಹೆಚ್ಚಳ, ಭತ್ಯೆ ಹಾಗೂ ಇತರೆ ಸೌಕರ್ಯಗಳನ್ನು ನೀಡುವ ಔರಾದಕರ್ ವರದಿಯ ಶಿಫಾರಸುಗಳನ್ನು ಯಥಾಸ್ಥಿತಿ ಜಾರಿಗೊಳಿಸಬೇಕು ಎಂದು ಮಾಜಿ ಗೃಹ ಸಚಿವ, ಶಾಸಕ ಎಂ.ಬಿ.ಪಾಟೀಲ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಈ ವರದಿಯನ್ನು ಭಾಗಶಃ ಮಾತ್ರ ಜಾರಿಗೊಳಿಸಿದ್ದು, ಯಥಾವತ್ತಾಗಿ ವರದಿಯನ್ನು ಜಾರಿಗೆ ತಂದಿಲ್ಲ ಎಂದು ಅವರು ಹೇಳಿದ್ದಾರೆ.
ಹಣಕಾಸು ಇಲಾಖೆ ನಿರ್ಧಾರದಿಂದ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಇದು ಅನ್ವಯವಾಗುತ್ತದೆ. ಆದರೆ, ಈಗಾಗಲೇ ಅನೇಕ ವರ್ಷಗಳ ಕಾಲ ಹಗಲಿರುಳು ಸೇವೆ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಪೊಲೀಸ್ ಸಿಬ್ಬಂದಿಗೆ ಅನ್ವಯವಾಗದೆ ಇರುವುದು ನಿರಾಶಾದಾಯಕ ಎಂದು ತಿಳಿಸಿದ್ದಾರೆ.
ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಪಣಕ್ಕಿಟ್ಟು, ಕರ್ತವ್ಯ ನಿರ್ವಹಿಸಿರುವ ರಾಜ್ಯದ ಪೊಲೀಸ್ ಇಲಾಖೆಯ ಸಮಸ್ತ ಸಿಬ್ಬಂದಿಗೆ ಔರಾದಕರ್ ವರದಿಯನ್ನು ಯಥಾಸ್ಥಿತಿ ಜಾರಿಗೊಳಿಸುವ ಮೂಲಕ ನ್ಯಾಯ ದೊರಕಿಸಬೇಕಿದೆ ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.