ವಿಜಯಪುರ: ಶಾಸಕ ಎಂ.ಬಿ.ಪಾಟೀಲ ಅವರ ಮನೆಗೆ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರಾಮ ಅರಸಿದ್ಧಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ರಾಜ್ಯದ ನೀರಾವರಿ ಹಾಗೂ ಮೇಕೆದಾಟು ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ಹಾಲಿಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಮಾಜಿ ಜಲ ಸಂಪನ್ಮೂಲ ಸಚಿವಎಂ.ಬಿ.ಪಾಟೀಲ ನಡುವೆ ಆರೋಪ, ಪ್ರತ್ಯಾರೋಪ, ವಾಗ್ವಾದ ತಾರಕಕ್ಕೇರಿರುವ ನಡುವೆ ಕೆಲವೂಂದು ಸಂಘಟನೆಗಳು ಪಾಟೀಲರ ಮನೆ ಎದುರು ಪ್ರತಿಭಟನೆ ನಡೆಸುತ್ತಿರುವುದರಿಂದ ಅವರ ಕುಟುಂಬದ ಸದಸ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.
ಎಂ.ಬಿ.ಪಾಟೀಲ ಲಿಂಗಾಯತ ಸಮಾಜದ ರಾಷ್ಟ್ರೀಯ ನಾಯಕರಾಗಿದ್ದಾರೆ. ಅಲ್ಲದೇ, ಮಾಜಿ ಜಲಸಂಪನ್ಮೂಲ ಸಚಿವರು ಮತ್ತು ಗೃಹ ಸಚಿವರು ಹಾಗೂ ಹಾಲಿ ಶಾಸಕರಾಗಿದ್ದಾರೆ. ಇವರ ಜನಪ್ರಿಯತೆ ಸಹಿಸದವರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ಪಾಟೀಲರ ಮನೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಸುಳ್ಳು ಆರೋಪ ಮಾಡುತ್ತಾ, ಬಹಿರಂಗವಾಗಿ ಅಸಂವಿಧಾನಿಕ ಶಬ್ದಗಳನ್ನು ಬಳಸಿ ತೇಜೋವಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಎಂ.ಬಿ.ಪಾಟೀಲರ ಪ್ರತಿಕೃತಿ ದಹನ ಮಾಡಿ, ಪ್ರಚೋದನಕಾರಿಯಾಗಿ ವರ್ತಿಸುತ್ತಿದ್ದಾರೆ. ಕಾರಜೋಳ ಅವರು ತಮ್ಮ ಬೆಂಬಲಿಗರನ್ನು ಕಳುಹಿಸಿ, ಪ್ರತಿಭಟನೆ ನಡೆಸುತ್ತಿರುವುದರಿಂದ ನಮಗೆ ಆತಂಕ ಉಂಟಾಗಿದೆ ಎಂದು ಹೇಳಿದ್ದಾರೆ.
ಎಂ.ಬಿ. ಪಾಟೀಲ ರಾಜ್ಯದಾದ್ಯಂತ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿರುತ್ತಾರೆ. ಅಲ್ಲದೇ, ಅವರ ಕುಟುಂಬ ಸದಸ್ಯರೂ ಕೂಡ ದಿನನಿತ್ಯದ ಕೆಲಸಗಳಿಗಾಗಿ ತಿರುಗಾಡುತ್ತಿರುತ್ತಾರೆ. ಹೀಗಾಗಿ ಪ್ರತಿಭಟನಾಕಾರರಿಂದ ಪದೇ ಪದೇ ಜೀವ ಬೆದರಿಕೆ ಇರುವುದರಿಂದ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ಭದ್ರತೆ ನೀಡಬೇಕು. ಅಲ್ಲದೇ, ಅವರ ನಿವಾಸಕ್ಕೆ ಸೂಕ್ತ ಭದ್ರತೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಾಗತಿಕ ಲಿಂಗಾಯಿತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷಜಿ. ಬಿ. ಸಾಲಕ್ಕಿ, ಜಿಲ್ಲಾ ಸಣ್ಣ ಕೈಗಾರಿಕೆ ಉದ್ದಿಮೆದಾರರ ಸಂಘದ ಅಧ್ಯಕ್ಷಡಾ.ಗಂಗಾಧರ ಸಂಬಣ್ಣಿ, ವಿಜಯಪುರ ಮರ್ಚಂಟ್ಸ್ ಅಸೋಶಿಯೇಷನ್ ಅಧ್ಯಕ್ಷರವೀಂದ್ರ ಬಿಜ್ಜರಗಿ,ರಾಷ್ಟ್ರೀಯ ಬಸವ ಸೇನೆಯಡಾ.ರವಿ ಬಿರಾದಾರ, ಸಂತೋಷ ಬಾಲಗಾಂವಿ, ಸಿದ್ದಪ್ಪ ಬಿ. ಸಜ್ಜನ, ಎಸ್. ಡಿ.ಗುಡ್ಡೋಡಗಿ, ಜಯಣ್ಣ ಎಸ್.ತಾಳಿಕೋಟಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.