ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆಗೆ ವಿರೋಧ

ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್‍ಓ ಸಂಘಟನೆಯಿಂದ ಪ್ರತಿಭಟನೆ
Last Updated 22 ಡಿಸೆಂಬರ್ 2021, 14:00 IST
ಅಕ್ಷರ ಗಾತ್ರ

ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಹೇರಿಕೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್‍ಓ ಸಂಘಟನೆ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಎಐಡಿಎಸ್‍ಓ ಸಂಘಟನೆಯ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಅಭಯಾ ದಿವಾಕರ್ ಮಾತನಾಡಿ, ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕವಾಗಿ ಮತ್ತು ಅತ್ಯಂತ ತರಾತುರಿಯಲ್ಲಿ ಎನ್‍ಇಪಿ ಜಾರಿಗೊಳಿಸಿದೆ ಎಂದು ಆರೋಪಿಸಿದರು.

ಆತುರದ ಹೇರಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದೆ. ನಾಲ್ಕು ವರ್ಷದ ಪದವಿ ಕೋರ್ಸಿನಲ್ಲಿ ಉಂಟಾಗಿರುವ ಗೊಂದಲಗಳು ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಪ್ರಥಮ ಪದವಿ ಕೋರ್ಸ್ ತರಗತಿಗಳು ಆರಂಭವಾಗಿ, ಇನ್ನೇನು ಒಂದೆರಡು ವಾರಗಳಲ್ಲಿ ಮೊದಲ ಆಂತರಿಕ ಪರೀಕ್ಷೆಗಳು ನಡೆಯುತ್ತವೆ. ಆದರೆ, ಇಷ್ಟು ದೂರ ಕ್ರಮಿಸಿದರೂ ಪಠ್ಯಕ್ರಮ ತಯಾರಾಗಿಲ್ಲ ಎಂದು ದೂರಿದರು.

ವಿದ್ಯಾರ್ಥಿಗಳಿಗೆ ಪಠ್ಯಪಸ್ತಕಗಳೇ ಸಿಕ್ಕಿಲ್ಲ. ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ತರಗತಿಗಳ ಕೊರತೆಯಿಂದಾಗಿ, ತರಗತಿ ಸಮಯ ಆರಂಭವಾದರೂ ಏನು ಮಾಡಬೇಕು ತಿಳಿಯದೇ ಕಳೆದ ಎರಡು ತಿಂಗಳಿನಿಂದ ಯಾವುದೇ ಸಮಗ್ರ ರೀತಿಯ ಅಧ್ಯಾಯಗಳು ಯಾವ ವಿಭಾಗದಲ್ಲೂ ನಡೆದಿಲ್ಲ ಎಂದು ದೂರಿದರು.

ಎಐಡಿಎಸ್‍ಓ ಜಿಲ್ಲಾ ಘಟಕದ ಅಧ್ಯಕ್ಷೆ ಸುರೇಖಾ ಕಡಪಟ್ಟಿ ಮಾತನಾಡಿ, ಯಾವುದೇ ನೂತನ ಶಿಕ್ಷಣ ನೀತಿ ಜಾರಿ ಆದಾಗ, ಅದರ ಆಧಾರದ ಮೇಲೆ ಶಿಕ್ಷಣ ತಜ್ಞರು, ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿ, ಪಠ್ಯಕ್ರಮ ತಯಾರಿಸುವ ಪ್ರಕ್ರಿಯೆಗೆ ಕನಿಷ್ಠ ಒಂದೆರಡು ವರ್ಷಗಳು ಬೇಕಾಗುತ್ತದೆ. ಆದರೆ, ಎನ್‍ಇಪಿ ಜಾರಿ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ನಿರ್ದೇಶನವನ್ನು ತಾನೇ ಮೊದಲು ಅನುಷ್ಠಾನಕ್ಕೆ ತಂದಿರುವ ಹೆಗ್ಗಳಿಕೆಗೆ ಪಾತ್ರವಾಗಲು ರಾಜ್ಯ ಸರ್ಕಾರವು ಕೇವಲ 15-20 ದಿನಗಳ ತಯಾರಿಯಲ್ಲಿ ನೀತಿಯನ್ನು ಜಾರಿ ಮಾಡಿದೆ ಎಂದು ದೂರಿದರು.

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಖಾಲಿಯಿರುವ ಶೇ 70 ರಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರಿಸುಮಾರು 14 ಸಾವಿರ ಅಥಿತಿ ಉಪನ್ಯಾಸಕರನ್ನು ಕಾಯಂ ಮಾಡಬೇಕು. ಆದರೆ, ಸರ್ಕಾರ ಇದರ ಬಗ್ಗೆ ಯಾವುದೇ ಆಸಕ್ತಿ ತೋರಿಲ್ಲ. ಬದಲಿಗೆ, ಇರುವ ಶಿಕ್ಷಕರ ಹುದ್ದೆಗೂ ಸಹ ಕೊಡಲಿ ಏಟು ನೀಡುವ ಯೋಚನೆ ನಡೆಸಿದೆ ಎಂದರು.

ಅಂಜುಮನ್ ಕಾಲೇಜಿನ ವಿದ್ಯಾರ್ಥಿ ಮುಸ್ತಫಾ ಪರಪನಹಳ್ಳಿ ಮಾತನಾಡಿ, ರಾಜ್ಯಲ್ಲಿ ತರಾತುರಿಯಲ್ಲಿ ಎನ್‍ಇಪಿ-2020ಯ ಹೇರಿಕೆ ವಿಧ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ ಮತ್ತು ಐಚ್ಛಿಕ ವಿಷಯಗಳ ಪಠ್ಯಪುಸ್ತಕ ಇಲ್ಲ, ಆ ವಿಷಯದ ಬೋಧನೆಗೆ ಶಿಕ್ಷಕರಿಲ್ಲ. ಹೇಗೆ ನಾವು ಶಿಕ್ಷಣ ಕಲಿಯಬೇಕು? ಆದ್ದರಿಂದ ನಾಲ್ಕು ವರ್ಷದ ಪದವಿ ದಿಡೀರ್ ಹೇರಿಕೆ ವಿರುದ್ಧ ಇನ್ನೂ ದೊಡ್ಡ ಪ್ರಮಾಣದ ಹೋರಾಟವನ್ನು ನಡೆಸಬೇಕಾದ ಅವಶ್ಯಕತೆ ಇದೆ ಎಂದರು.

ವಿದ್ಯಾರ್ಥಿ ಮುಖಂಡರಾದಕಾವೇರಿ ರಜಪೂತ, ಸುಸ್ಮಿತಾ, ಅಕ್ಷತಾ, ಮೊಹಮದ್, ಪೊಜಾ ಸ್ಡಾತಿ, ಭಾಗ್ಯಶ್ರೀ, ತೌಫೀಕ್, ಅನ್ವರ್, ರಾಜು, ಗಣೇಶ, ರಫೀಕ್, ಫರ್ಹಾನ್ ಪ್ರತಿಭಟನೆಯಲ್ಲಿ ಭಾಗವಹಿಸಿದರು.

* ಪೂರ್ವ ತಯಾರಿ ಇಲ್ಲದೆ, ಸರ್ಕಾರದ ಇಂತಹ ಅಡ್ಡಾದಿಡ್ಡಿ ಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುತ್ತದೆ

–ಸುರೇಖಾ ಕಡಪಟ್ಟಿ, ಅಧ್ಯಕ್ಷೆ,ಎಐಡಿಎಸ್‍ಓ ವಿಜಯಪುರ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT