ಸೋಲಾಪುರ: ಜಿಲ್ಲೆಯ ಕುಲದೇವರಾದ ಪಂಢರಪುರದ ವಿಠ್ಠಲ ರುಕ್ಮಿಣಿ ಆಷಾಢ ಯಾತ್ರೆಯು ಜುಲೈ 10 ರಿಂದ ಪ್ರಾರಂಭವಾಗಲಿದೆ.
ಸಂತ ತುಕಾರಾಂ, ಜ್ಞಾನೇಶ್ವರ, ದಾಮಾಜಿ, ನಾಮದೇವ ಏಕನಾಥ ಅವರ ಪಾದುಕೆಗಳನ್ನು ಹೊತ್ತ ಪಲ್ಲಕ್ಕಿಗಳು ಲಕ್ಷಾಂತರ ಜನರ ಜೊತೆಗೂಡಿ ವಿಜೃಂಭಣೆ ಉತ್ಸಾಹದಿಂದ ಪಂಢರಪುರದ ಕಡೆಗೆ ತೆರಳುತ್ತಿವೆ. ಆಷಾಢ ಕಾರ್ಯಕ್ರಮಕ್ಕೆ ವಿಠಲ ನಗರಿ ವಿಜ್ರಂಭಣೆಯಿಂದ ಸಜ್ಜುಗೊಳ್ಳುತ್ತಿದೆ.
ಕೋವಿಡ್ ಕಾರಣದಿಂದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದ ಆಷಾಢ ಯಾತ್ರೆ ಈ ವರ್ಷ ಪುನರಾರಂಭವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಪ್ರಥಮ ದಿನ ಪೂಜೆ ನೆರವೇರಿಸಿ, ವಿಠಲ–ರುಕ್ಮಿಣಿ ದರ್ಶನ ಪಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಂಢರಾಪುರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪಾದಯಾತ್ರಿಗಳಿಗೆ ಊಟ, ವಸತಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಾಲಯದ ಆವರಣ ಸೇರಿದಂತೆ ಇಡೀ ನಗರದಲ್ಲಿ ಸ್ವಚ್ಛತೆ ಕಾಪಾಡಲು ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ.