ವಿಜಯಪುರ: ನಗರದಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರು ಅಡ್ಡಿ ಪಡಿಸಿ, ಗದ್ದಲ ಎಬ್ಬಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಬಿಜೆಪಿ ನಾಯಕರು ಕಾರ್ಯಕ್ರಮ ಉದ್ಘಾಟನೆಗೆ ಮುಂದಾದಾಗ ಯತ್ನಾಳ ವೇದಿಕೆಗೆ ಬರುವವರೆಗೂ ಕಾರ್ಯಕ್ರಮ ಉದ್ಘಾಟಿಸಬಾರದು ಎಂದು ಅಡ್ಡಿಪಡಿಸಿದರು.
ಬಿ ಆರ್ ಪಿ, ಬಿ ಆರ್ ಪಿ ಎಂದು ಘೋಷಣೆ ಕೂಗಿದರು. ಚುನಾವಣೆಯಲ್ಲಿ ಯತ್ನಾಳ ಅವರಿಗೆ ದ್ರೋಹ ಬಗೆದವರನ್ನು ಸಭೆಯಿಂದ ಹೊರಹಾಕಿ ಎಂದು ಒತ್ತಾಯಿಸಿದರು.
ವೇದಿಕ ಮೇಲೆ ಉಪಸ್ಥಿತರಿದ್ದ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ದ ಧಿಕ್ಕಾರ ಹಾಕಿದರು.
ಗದ್ದಲದ ವಾತಾವರಣದಿಂದ ಬೇಸರಗೊಂಡ ಸಂಸದ ರಮೇಶ ಜಿಗಜಿಣಗಿ,ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಸಭೆಯಿಂದ ಹೊರನಡೆದರು.
ಯತ್ನಾಳ ಬೆಂಬಲಿಗರನ್ನು ತಡೆಯಲು ಪೊಲೀಸರು, ಬಿಜೆಪಿ ಮುಖಂಡರು ಹರಸಾಹಸ ಪಟ್ಟರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲವನ್ನೂ ಮೌನವಾಗಿ ನೋಡುತ್ತಾ ವೇದಿಕೆಯಲ್ಲಿ ಕುಳಿತಿದ್ದರು. ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ ವೇದಿಕೆಯಲ್ಲೇ ಇದ್ದರು.