ವಿಜಯಪುರ: ಕೋವಿಡ್ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾದ ಎರಡನೇ ವಾರಾಂತ್ಯ ಕರ್ಫ್ಯೂಗೆ ನಗರವಾಸಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಹಾಲು, ಹಣ್ಣು, ತರಕಾರಿ, ಮೀನು, ಮಾಂಸ, ದಿನಪತ್ರಿಕೆಗಳು ಪೂರೈಕೆಗೆ ಯಾವುದೇ ನಿರ್ಬಂಧವಿರಲಿಲ್ಲ. ಎಂದಿನಂತೆ ಆಟೊ, ಬಸ್, ರೈಲು ಸಂಚಾರ ಇತ್ತಾದರೂ ಪ್ರಯಾಣಿಕರ ಸಂಖ್ಯೆ ಕ್ಷೀಣವಾಗಿತ್ತು.
ವಾಣಿಜ್ಯ ಮಳಿಗೆ, ಮಾಲ್ಗಳು ಬಾಗಿಲು ಬಂದ್ ಆಗಿದ್ದವು. ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಸಿನಿಮಾ ಮಂದಿರಗಳಲ್ಲೂ ಪ್ರದರ್ಶನವಿರಲಿಲ್ಲ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ಗೆ ಅವಕಾಶವಿದ್ದರೂ ಗ್ರಾಹಕರು ಇತ್ತ ಸುಳಿಯಲಿಲ್ಲ.
ಸಂಕ್ರಾಂತಿ ಹಬ್ಬವಿದ್ದರೂ ಸಹ ಬಹುತೇಕ ದೇವಸ್ಥಾನಗಳ ಬಾಗಿಲು ಮುಚ್ಚಿದ್ದವು. ಹಬ್ಬದ ಅಂಗವಾಗಿ ಅರ್ಚಕರು ಮಾತ್ರ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ದೇವಸ್ಥಾನಗಳತ್ತ ಸುಳಿಯಲಿಲ್ಲ.ಮನೆಯಲ್ಲೇ ಹಬ್ಬವನ್ನು ಆಚರಿಸಿದರು.
ನಗರದ ಗೋಳಗುಮ್ಮಟ, ಬಾರಾ ಕಮಾನ್, ಇಬ್ರಾಹಿಂ ರೋಜಾ ಸೇರಿದಂತೆ ಬಹುತೇಕ ಪ್ರವಾಸಿತಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಪ್ರವಾಸಿಗರಿಲ್ಲದ ಕಾರಣಕ್ಕೆ ಟಾಂಗಾ, ಆಟೋ ರಿಕ್ಷಾ ಚಾಲಕರು ದುಡಿಮೆ ಇಲ್ಲದೇ ಬೇಸರದಲ್ಲಿದ್ದರು.
ನಗರದ ಪ್ರಮುಖ ವೃತ್ತ, ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅನಗತ್ಯ ಸಂಚಾರಕ್ಕೆ ತಡೆ ಒಡ್ಡಿದ್ದರು. ಪೊಲೀಸರು ಬೈಕು, ಕಾರುಗಳನ್ನು ಅಡ್ಡಗಟ್ಟಿ ಪ್ರಯಾಣದ ವಿವರ ಪಡೆದು ಬಿಟ್ಟರು. ಅನಗತ್ಯವಾಗಿ ಸಂಚರಿಸುವವರ ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದರು.
ದಿನದಿಂದ ದಿನಕ್ಕೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದರಿಂದ ಜನರು ಎಚ್ಚೆತ್ತುಕೊಂಡಿದ್ದು, ಅನಗತ್ಯ ಸಂಚಾರಕ್ಕೆ ಸ್ವಯಂ ಪ್ರೇರಿತವಾಗಿ ನಿಲ್ಲಿಸಿದ್ದಾರೆ. ಮಾಸ್ಕ್ ಧರಿಸುವುದು, ಕೈಗಳಿಗೆ ಸ್ಯಾನಿಟೈಜ್ ಸಿಂಪಡಣೆ ಮಾಡಿಕೊಳ್ಳುವುದು ಕಂಡುಬರುತ್ತಿದೆ. ಇಷ್ಟಾದರೂ ಸಹ ಅನೇಕರು ಮಾಸ್ಕ್ ತೊಡದೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.