ವಿಜಯಪುರ:ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಕೊಳೆಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್)ಯ ಪ್ರತ್ಯೇಕ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯ ಜೊತೆಗೆ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯನ್ನು ವಿಜಯಪುರಕ್ಕೆ ಮಂಜೂರು ಮಾಡುವುದಾಗಿವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು,ಕೊಳೆಗೇರಿ ಅಭಿವೃದ್ಧಿ ಮಂಡಳಿಯಕಾರ್ಯನಿರ್ವಾಹಕ ಎಂಜಿನಿಯರ್ ಕಾರ್ಯಾಲಯವಿಜಯಪುರದಲ್ಲಿ ಶೀಘ್ರ ಕಾರ್ಯಾರಂಭಗೊಳ್ಳಲಿದೆ ಎಂದರು.
ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ಸೇರಿ ಇದ್ದ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕೇವಲ ಒಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಯಿಂದ ಒಬ್ಬ ಅಧಿಕಾರಿ ಎರಡೂ ಜಿಲ್ಲೆಗಳಿಗೆ ಹೋಗಿ ಅನೇಕ ತಾಲ್ಲೂಕುಗಳಿಗೆ ಭೇಟಿ ಕೊಟ್ಟು ದೂರದ ಬೆಳಗಾವಿಯಲ್ಲಿರುವ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ಅನುಮೋದನೆಗಾಗಿ ಹೋಗಬೇಕಾಗಿತ್ತು. ಇದರಿಂದ ಆಡಳಿತಾತ್ಮಕವಾಗಿ ತೊಂದರೆಯಾಗುತ್ತಿರುವುದನ್ನು ಸಚಿವರ ಗಮನಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಂದರು.
ನಗರದ ಅಟಲ್ ಬಿಹಾರಿ ವಾಜಪೇಯಿ ರಸ್ತೆಯ ಎ.ಪಿ.ಎಂ.ಸಿ ಎದುರಿನ ಬಂಬಳ ಅಗಸಿಯ 7.14 ಎಕರೆ ಪ್ರದೇಶವನ್ನು ಪಾಲಿಕೆಯಿಂದ ಸ್ಲಂ ಬೋರ್ಡ್ಗೆ ಹಸ್ತಾಂತರಿಸಿ ಅಲ್ಲಿ 1 ಸಾವಿರ ಮನೆಗಳನ್ನು (ಜಿ+3) ನಿರ್ಮಿಸಿ, ಭೀಮ ನಗರ ಎಂದು ನಾಮಕರಣ ಮಾಡುವಂತೆ ಸಚಿವರ ಗಮನಕ್ಕೆ ಶಾಸಕರು ತಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಫಲಾನುಭವಿಗಳ ವಂತಿಗೆ ಹಣ ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡದವರಿಗೆ ₹1.20 ಲಕ್ಷದಿಂದ ₹ 2.37 ಲಕ್ಷ ವರೆಗೆ ಹಾಗೂ ಸಾಮಾನ್ಯ ವರ್ಗದವರಿಗೆ ₹ 1.80 ಲಕ್ಷ ದಿಂದ ₹ 3.17 ಲಕ್ಷ ವರೆಗೆ ಏರಿಕೆ ಆಗಿರುವು ದರಿಂದ ವಂತಿಗೆ ಹಣ ತುಂಬಲು ಫಲಾನುಭವಿಗಳು ಹಿಂಜರಿಯುತ್ತಿರುವುದನ್ನು ಮತ್ತು ಕಷ್ಟವಾಗುತ್ತಿರುವುದನ್ನು ಸಚಿವರ ಗಮನಕ್ಕೆ ಯತ್ನಾಳ ತಂದರು.
ಇನ್ನು ಮುಂದೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹಾಗೂ ಸ್ಲಂಬೋರ್ಡ್ ನಿಂದ ಕಟ್ಟುವ ಮನೆಗಳ ಫಲಾನುಭವಿಗಳ ವಂತಿಗೆ ಹಣವನ್ನು ಸಾಮಾನ್ಯ ವರ್ಗದವರಿಗೆ ₹ 2 ಲಕ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ₹ 1 ಲಕ್ಷ ಹಾಗೂ ಎರಡೂ ಯೋಜನೆಗಳಿಗೆ ಒಂದೇ ರೀತಿ ವಂತಿಗೆ ಹಣವನ್ನು ನಿಗದಿಪಡಿಸುವುದಾಗಿ ಸಚಿವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.