ಮುದ್ದೇಬಿಹಾಳ (ವಿಜಯಪುರ): ತಾಲ್ಲೂಕಿನ ಬಳವಾಟ ಗ್ರಾಮದಲ್ಲಿ ಸೋಮವಾರ ನಿಧನರಾದ ಮಹಿಳೆಯೊಬ್ಬರ ಶವವನ್ನು ಹಳ್ಳದಲ್ಲಿ ಮುಳುಗಿರುವ ರಸ್ತೆಯಲ್ಲೇ ಗ್ರಾಮಸ್ಥರು ಹೊತ್ತೊಯ್ದು, ಅಂತ್ಯ ಸಂಸ್ಕಾರ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗ್ರಾಮದಲ್ಲಿ ಸೋಮವಾರ ನಿಧನರಾದ ಕಾಶಿಂಸಾಬ ಮುರ್ತೂಜಸಾಬ ದೊಡಮನಿ (81) ಅವರ ಶವಪೆಟ್ಟಿಗೆ ಹೊತ್ತು ಹಳ್ಳ ದಾಟಿದ ಗ್ರಾಮಸ್ಥರು ಬಳಿಕ ಶವ ಸಂಸ್ಕಾರ ಮಾಡಿದ್ದಾರೆ.
ಮುಸ್ಲಿಂ ಹಾಗೂ ವಡ್ಡರ ಸಮಾಜದವರಿಗೆ ಸರ್ಕಾರ ನೀಡಿರುವ ಸ್ಮಶಾನ ತಲುಪಲು ಪ್ರತಿ ಬಾರಿ ಹರಸಾಹಸ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಈ ಸಮುದಾಯದವರಿಗೆ ಸ್ಮಶಾನ ಭೂಮಿ ಇಲ್ಲ ಎಂದಾಗ ತಲಾ ಎರಡು ಎಕರೆ ಗೋಮಾಳದ ಜಾಗವನ್ನು ಸರ್ಕಾರ ನೀಡಿದೆ. ಆದರೆ, ಬಳವಾಟ ಗ್ರಾಮದಿಂದ ಒಂದು ಕಿ.ಮೀ.ದೂರದಲ್ಲಿರುವ ಈ ಸ್ಮಶಾನ ಭೂಮಿ ತಲುಪಲು ಕನಿಷ್ಠ 100 ಮೀಟರ್ ತುಂಬಿ ಹರಿಯುವ ಹಳ್ಳವನ್ನು ದಾಟಿಯೇ ಹೋಗಬೇಕು ಎಂದುಗ್ರಾಮದ ಅಣ್ಣುಗೌಡ ಬಿರಾದಾರ ಹೇಳಿದರು.
ಈ ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ಈ ಎರಡೂ ಸಮುದಾಯಕ್ಕೆ ಅನುಕೂಲ ಆಗುತ್ತದೆ ಎಂದು ಲಾಲಸಾಬ ನದಾಫ ಹೇಳಿದರು.