ವಿಜಯಪುರ: ಇಲ್ಲಿನ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಕಾರಿ ಮತ್ತು ಮತ್ತು ಸಹಾಯಕ ಆಡಳಿತಾಕಾರಿಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 20ರಂದು ಧರಣಿ ನಡೆಸಲಾಗುವುದು ಎಂದು ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಮೇಲಧಿಕಾರಿಗಳು, ಕಾರ್ಮಿಕರ ವೈದ್ಯಕೀಯ ಬಿಲ್ಗಳನ್ನು (1075 ಪ್ರಕರಣ) 2 ವರ್ಷಗಳಾದರೂ ಕೇಂದ್ರ ಕಚೇರಿಗೆ ಕಳುಹಿಸದೆ ತಡವಾಗಿ ಕಳುಹಿಸಿದ್ದಾರೆ. ಕೇಂದ್ರ ಕಚೇರಿಯಿಂದ ಬಂದ ಬಿಲ್ಗಳನ್ನು ತಮ್ಮಲ್ಲೇ ಇಟ್ಟುಕೊಂಡು ಸತಾಯಿಸುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ವಿಭಾಗೀಯ ನಿಯಂತ್ರಣಾಕಾರಿಗಳು ಕೇಂದ್ರ ಕಚೇರಿಯ ಸುತ್ತೋಲೆಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ದಂಡ ವಿಧಿಸುತ್ತಾರೆ. ಸಣ್ಣಪುಟ್ಟ ಕಾರಣಗಳಿಗೆ ಅಮಾನತುಗೊಳಿಸುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅನೇಕ ನೌಕರರಿಗೆ ಗೈರು ಹಾಜರಿ ಹಾಕಿ, ವೇತನ ಕೊಡದೆ ದಂಡ ವಿಧಿಸುತ್ತಿದ್ದಾರೆ ಎಂದು ದೂರಿದರು.
ನಿವೃತ್ತರಾದ ಕಾರ್ಮಿಕರಿಗೆ ರಜೆಯ ನಗದು ಕೊಟ್ಟಿಲ್ಲ. ಇದರಿಂದ ನಿವೃತ್ತರಿಗೆ ಬರಬೇಕಾದ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎಂ.ಎಚ್.ಅಗರಖೇಡ್, ಕಾರ್ಯಾಧ್ಯಕ್ಷ ಎ.ಎ.ಮುಲ್ಲಾ, ಪದಾಧಿಕಾರಿಗಳಾದ ಗೋಪಾಲ ಮಲಕನಗೌಡ ಬಿರಾದಾರ, ಅಶೋಕ ಪವಾರ, ಕುತುಬ್ ಅಗರಖೇಡ, ಎಂ.ಎನ್.ಇಲಕಲ್ ಇದ್ದರು.