ಕೊಲ್ಹಾರ: ಜಮೀನಿಗೆ ನೀರು ಹಾಯಿಸಲು ಕಾಲುವೆ ಬಳಿಯ ಮೋಟಾರ್ ಚಾಲೂ ಮಾಡಲು ಹೋಗಿ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಕಾಲುವೆಗಿಳಿದ ಮತ್ತೊಬ್ಬ ವ್ಯಕ್ತಿಯೂ ಕಾಲುವೆ ಪಾಲಾದ ಘಟನೆ ತಾಲ್ಲೂಕಿನ ಮಸೂತಿ ಗ್ರಾಮದ ಬಳಿಯ ದೊಡ್ಡ ಕಾಲುವೆಯಲ್ಲಿ ಮಂಗಳವಾರ ನಡೆದಿದೆ.
ಮಸೂತಿ ಗ್ರಾಮದ ಅಶೋಕ ಈರಬಸಪ್ಪ ಅಂಗಡಗೇರಿ (51) ಹಾಗೂ ಚಂದ್ರಶೇಖರ ಈರಪ್ಪ ಡೆಂಗಿ (42) ಸಾವಿಗೀಡಾದವರು.
ಜಮೀನಿನಲ್ಲಿ ಹಾಯ್ದು ಹೋಗಿರುವ ಕಾಲುವೆಯಲ್ಲಿ ಕಾಲುಜಾರಿ ಬಿದ್ದ ಮಾವ ಅಶೋಕನನ್ನು ರಕ್ಷಿಸಲು ಹೋದ ಅಳಿಯ ಚಂದ್ರಶೇಖರ ಸಹ ಕಾಲುವೆಯಲ್ಲಿ ಮುಳುಗಿದ್ದು, ಇಬ್ಬರೂ ನೀರು ಪಾಲಾಗಿದ್ದಾರೆ.
ಘಟನಾ ಸ್ಥಳದಲ್ಲಿ ಮೃತ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಕೂಡಗಿ ಎನ್ಟಿ ಪಿಸಿ ಪಿಎಸ್ಐ ರೇಣುಕಾ ಹಳ್ಳಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.