ವಿಜಯಪುರ: ‘ನಗರದಲ್ಲಿ ಬಿಡಾಡಿ ಜಾನುವಾರುಗಳಿಂದ ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗುತ್ತಿದೆ. ಜಾನುವಾರುಗಳನ್ನು ಬಿಡಾಡಿಯಾಗಿ ಬಿಟ್ಟಲ್ಲಿ ಅಂತಹ ಜಾನುವಾರುಗಳನ್ನು ವಾರಸುದಾರರಿಲ್ಲದ ಜಾನುವಾರು ಎಂದು ಪರಿಗಣಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
‘ಅಂಥ ಜಾನುವಾರುಗಳನ್ನು ಮಹಾನಗರ ಪಾಲಿಕೆ ಹಾಗೂ ಆರಕ್ಷಕರ ಸುಪರ್ದಿಗೆ ತೆಗೆದುಕೊಂಡು, ಗೋಶಾಲೆಗಳಿಗೆ ಕಳುಹಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಕಲಂ 442ರನ್ವಯ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
‘ಬಿಡಾಡಿ ಜಾನುವಾರುಗಳಾದ ಆಕಳು, ಎತ್ತು, ಎಮ್ಮೆ, ಕತ್ತೆ, ಕುದುರೆಗಳಿಂದ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಜಾನುವಾರುಗಳನ್ನು ಬಿಡಾಡಿಯಾಗಿ ಅಲೆಯಲು ಬಿಡದೇ ಕಟ್ಟಿಹಾಕುವಂತೆ ಮಹಾನಗರ ಪಾಲಿಕೆ ವತಿಯಿಂದ ಹಲವಾರು ಬಾರಿ ಡಂಗುರ, ಪತ್ರಿಕೆಗಳ ಮೂಲಕ ತಿಳಿವಳಿಕೆ ನೀಡಲಾಗಿತ್ತು. ಶಾಶ್ವತವಾಗಿ ತಡೆಗಟ್ಟಲು ನೋಟಿಸ್ ನೀಡಲಾಗಿದ್ದು, ಏಳು ದಿನಗಳೊಳಗೆ ಜಾನುವಾರುಗಳನ್ನು ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯಾಗದಂತೆ ನಿಮ್ಮ ಆಸ್ತಿಯಲ್ಲಿ ಕಟ್ಟಿಹಾಕಿಕೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.