ವಿಜಯಪುರ: ತಾಲ್ಲೂಕಿನ ಹಿಟ್ನಳ್ಳಿ ಟೋಲ್ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಗಾಂಜಾವನ್ನು ಅಬಕಾರಿ ಸಿಬ್ಬಂದಿ ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಹರಿಯಾಣ ರಾಜ್ಯದ ಲಾರಿ(ಎಚ್.ಆರ್.50 ಜಿಪಿ 1695)ಯೊಂದರಲ್ಲಿ ನಾಲ್ಕು ಪ್ಲಾಸ್ಟಿಕ್ ಚೀಲಗಳಲ್ಲಿ 4 ಕೆ.ಜಿ ಗಾಂಜಾದ ಬೀಜ ಹಾಗೂ ಇನ್ನೊಂದು ಪ್ಲ್ಯಾಸ್ಟಿಕ್ ಚೀಲದಲ್ಲಿ 1 ಕೆ.ಜಿಯಷ್ಟು ಗಾಂಜಾ ಪುಡಿಯನ್ನು ತುಂಬಿಕೊಂಡು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಸಂಬಂಧ ರಾಜಸ್ಥಾನದ ಮುನಿರಾಂ ಬಿಸನೋಯಿ ಮತ್ತು ಪೂನಂಚಾಂದ್ ಬಿಸನೋಯಿ ಎಂಬುವವರನ್ನು ಬಂಧಿಸಿ, ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಅಬಕಾರಿ ಜಂಟಿ ಆಯುಕ್ತ ಡಾ.ವೈ.ಮಂಜುನಾಥ ಹಾಗೂ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ವಿಜಯಪುರ ತಹಶೀಲ್ದಾರ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ, ಭೀಮಣ್ಣ ಕುಂಬಾರ, ಪರಶುರಾಮ ತೆಲಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು.