ಸಿಂದಗಿ: ‘ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ. ತಳಮಟ್ಟದಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
‘ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ ಯುವಕರಾಗಿದ್ದು, ಸಿಂದಗಿ ಮತಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ಹಗಲಿರುಳು ಕಾರ್ಯ ಪ್ರವೃತ್ತರಾಗಿರುವುದು ಹೆಮ್ಮೆಯ ವಿಷಯ’ ಎಂದರು.
‘ರಾಜ್ಯ ಸರ್ಕಾರದ 4 ವರ್ಷದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡುವುದು ಅಷ್ಟೇ ಮುಖ್ಯ ಕಾರ್ಯವಾಗಿದೆ. ಈ ಕಾರ್ಯವನ್ನು ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡಬೇಕು’ ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಶಾಸಕರಾದ ಶಿವಾನಂದ ಪಾಟೀಲ, ರಾಜೂ ಆಲಗೂರ, ಎಂ.ಎಂ. ಬಾಗವಾನ, ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಾಷಾಸಾಬ ತಾಂಬೋಳಿ, ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿಂಗನಗೌಡ ಪಾಟೀಲ, ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ನರಸಿಂಗಪ್ರಸಾದ ತಿವಾರಿ, ರಾಜಶೇಖರ ಕೂಚಬಾಳ, ಮುಸ್ತಾಕ ಮುಲ್ಲಾ, ಮುನ್ನಾ ಭೈರಾಮಡಗಿ, ಯೋಗಪ್ಪಗೌಡ ಪಾಟೀಲ, ಮಲ್ಲೂ ಗತ್ತರಗಿ, ಚನ್ನೂ ವಾರದ, ಕೊಣ್ಣೂರ ವಕೀಲ ಇದ್ದರು.
ಕಾರ್ಯಾಲಯ: ಖಂಡನೆ
ಸಿಂದಗಿ: ‘ರೈತರಿಗಾಗಿ ಮೀಸಲಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ರಾಜಕೀಯ ಪಕ್ಷದ ಕಾರ್ಯಾಲಯವನ್ನು ಸ್ವತಃ ಮುಖ್ಯಮಂತ್ರಿ ಸಿದ್ರರಾಮಯ್ಯನವರೇ ಉದ್ಘಾಟನೆ ಮಾಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ’ ಎಂದು ಬಿಜೆಪಿ ಧುರೀಣ ಶ್ರೀಕಾಂತ ಸೋಮಜಾಳ ಖಂಡಿಸಿದ್ದಾರೆ.
‘ಸರ್ಕಾರ ಕೃಷಿ ಮಾರುಕಟ್ಟೆ ಮಾಡಿರುವುದು ರೈತರಿಗೆ ಪ್ರಯೋಜನವಾಗಲು. ಆದರೆ ಸಿಂದಗಿಯಲ್ಲಿ ಮಾರುಕಟ್ಟೆ ಸಮಿತಿ ಆವರಣ ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಾಲಯಗಳಿವೆ. ರಾಜಕೀಯ ಪುಢಾರಿಗಳು ನಿವೇಶನ ಪಡೆದು ಬೇರೆ, ಬೇರೆ ವ್ಯಾಪಾರಿಗಳಿಗೆ ಬಾಡಿಗೆ ಕೊಟ್ಟಿರುವುದು ನಾಚಿಕೆಗೇಡು’ ಎಂದು ಅವರು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.