ವಿಜಾಪುರ: ನೀರು ಕುಡಿಯಲೆಂದು ಬಾವಿಗಿಳಿದ ಬಾಲಕಿಯರಿಬ್ಬರು ಆಯತಪ್ಪಿ ನೀರಿನಲ್ಲಿ ಬಿದ್ದು ಪ್ರಾಣ ತೆತ್ತ ಘಟನೆ ಸಿಂದಗಿ ತಾಲ್ಲೂಕಿನ ನಾಗಾವಿ ತಾಂಡಾದಲ್ಲಿ ಶನಿವಾರ ಸಂಭವಿಸಿದೆ.
ತಾಂಡಾದ ಶ್ರೀದೇವಿ ಶೀನು ಪವಾರ (8) ಹಾಗೂ ಸುನಿತಾ ಶಿವುಲಾಲ ಪವಾರ (12) ಮೃತಪಟ್ಟವರು. ಬಾಯಾರಿಕೆಯಾದ ಸಂದರ್ಭದಲ್ಲಿ ನೀರು ಕುಡಿಯಲೆಂದು ಈ ಇಬ್ಬರು ಬಾಲಕಿಯರು ಜೊತೆಗೂಡಿ ಬಾವಿಗೆ ಇಳಿದಿದ್ದಾರೆ. ಈ ವೇಳೆಯಲ್ಲಿ ಶ್ರೀದೇವಿ ಆಯತಪ್ಪಿ ನೀರಿನಲ್ಲಿ ಬಿದ್ದಳು. ಇದರಿಂದ ದಿಕ್ಕು ತೋಚದ ಸುನಿತಾ, ಶ್ರೀದೇವಿಯ ಪ್ರಾಣ ರಕ್ಷಿಸಲು, ತನ್ನ ಜೀವದ ಹಂಗು ತೊರೆದು ಧೈರ್ಯದಿಂದ ನೀರಿಗೆ ಜಿಗಿದು ಬಿಟ್ಟಿದ್ದಾಳೆ.
ಅತ್ತ ಶ್ರೀದೇವಿಯ ಪ್ರಾಣ ಉಳಿಸಲಾಗದೆ ಕೈ ಸೋತ ಸುನಿತಾ ತಾನು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸಿಂದಗಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.