ವಂದಾಲ (ನಿಡಗುಂದಿ): ಗ್ರಾಮದ ಶ್ರೀ ಬನಶಂಕರಿ ದೇವಿಯ ಜಾತ್ರೆಯ ಅಂಗವಾಗಿ ಮಂಗಳವಾರ ಮಧ್ಯಾಹ್ನ ದ್ಯಾಮವ್ವನ ಸೋಗು ಎಂಬ ವಿಶಿಷ್ಟ ಮೆರವಣಿಗೆ ಸಹಸ್ರಾರು ಜನರ ಮಧ್ಯೆ ಸಂಭ್ರಮ, ಸಡಗರದಿಂದ ಜರುಗಿತು.
ಜನಪದ ಕಲೆಯ ಪ್ರತೀಕವಾಗಿರುವ ಈ ಸೋಗು ಬಹು ವಿಶಿಷ್ಟತೆಯಿಂದ ಕೂಡಿದೆ. ನೂರಾರು ವರ್ಷಗಳಿಂದಲೂ ಸಾಗಿ ಬಂದಿರುವ ಈ ಸೋಗಿನ ಪರಂಪರೆ ಆಯಾ ಮನೆತನಗಳ ಇಂದಿನ ಪೀಳಿಗೆಯವರು ಆಧುನಿಕ ಭರಾಟೆ ಯಲ್ಲಿಯೂ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ.
ದ್ಯಾಮವ್ವ ಎಂಬ ದೇವಿಯ ಪ್ರತಿ ರೂಪವಾಗಿ ಒಬ್ಬ ಯುವಕ ಸೋಗನ್ನು ಹಾಕುತ್ತಾನೆ. ಆತನಿಗೆ ಸುಮಾರು ಎರಡು ಗಂಟೆಗಳ ಕಾಲ ವಿಶೇಷ ಅಲಂಕಾರ ಮಾಡಲಾಗುತ್ತದೆ. ಆತನಿಗೆ ಕಿರೀಟ, ದೇವಿ ಆಕಾಶದಲ್ಲಿ ಬರುತ್ತಾಳೆ ಎಂಬ ಸೂಚನೆಯಂತೆ ಕೈಗೆ ರೆಕ್ಕೆಗಳು, ಕೊರಳಲ್ಲಿ ಬಂಗಾರದ ಆಭರಣಗಳು, ಕಣ್ಣಿಗೆ ಬೆಳ್ಳಿಯ ಲೇಪನ, ಸೊಂಟದಲ್ಲಿ ಡಾಬು ಹೀಗೆ ಆ ದೇವಿಯ ಸೋಗು ಹಾಕುವವನಿಗೆ ಅಲಂಕಾರ ಮಾಡಲಾ ಗಿರುತ್ತದೆ. ಈ ಬಾರಿ ಸುಭಾಸ ಚಲ್ಮಿ ದ್ಯಾಮವ್ವನ ಸೋಗು ಹಾಕಿಕೊಂಡಿದ್ದನು.
ದ್ಯಾಮವ್ವನ ಸೋಗಿನಲ್ಲಿದ್ದ ಎಲ್ಲರಿಗೂ ಸುಮಾರು ಎರಡು ಗಂಟೆಗಳ ಕಾಲ ಗೋವಿಂದ ಪತಂಗೆ, ಮಹಾರಾಜ ಬಡಿಗೇರ ಮೇಕಪ್ ಮಾಡಿದರು.
ಅದೇ ರೀತಿ ದೇವಿಯ ಭಕ್ತರಾಗಿ ಕಾಡಿನಲ್ಲಿ ವಾಸಿಸುವ ಪೋತರಾಜನ ಪ್ರತೀಕವಾಗಿ ಶಂಕರ ಇಂಗಳೇಶ್ವರ ಜನರು ಸೋಗು ಹಾಕಿ, ಕೈಯಲ್ಲಿ ಹಗ್ಗ ವನ್ನು ಹಿಡಿದು ನೆಲವನ್ನು ಬಡಿಯುತ್ತಾ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದರು.
ದೇವಿಯ ಆರಾಧನೆಗಾಗಿ ಚೌಡಕಿ ಪದಗಳು, ಡೊಳ್ಳಿನ ನಿನಾದ ಕಂಡು ಬಂತು. ಮೆರವಣಿಗೆಯ ಮುಂದೆ ತಮ್ಮ ಮುಖವನ್ನು ಅಲಕಾಂರಮಾಡಿಕೊಂಡು ಶಿವಾನಂದ ವಡವಡಗಿ, ಮಂಜುನಾಥ ಜಾಲಿಮಿಂಚಿ, ಈರಣ್ಣ ಚಲ್ಮಿ ಮಂಜು ಜಾಲಿಮಿಂಚಿ ಮೊದಲಾದವರು ಡೊಳ್ಳು ಬಡಿದರು.
ನಿತ್ಯ ಬದುಕಿನಲ್ಲಿ ಇವಾರರು ಈ ಪಾತ್ರಗಳನ್ನು ನಿರ್ವಹಿಸದಿದ್ದರೂ, ಜಾತ್ರೆಯ ದಿನ ಮಾತ್ರ ಸೋಗನ್ನು ಹಾಕಿ ತಮ್ಮ ಭಕ್ತಿಯನ್ನು ಮೆರೆಯುತ್ತಾರೆ.
ಒಟ್ಟಾರೇ ಸುಮಾರು 3 ಗಂಟೆಗಳ ಕಾಲ ನಿಡಗುಂದಿಯ ಪ್ರಮುಖ ಬಡಾ ವಣೆಗಳಲ್ಲಿ ತಿರುಗಿ ನಂತರ ಸಂಜೆ 6ಕ್ಕೆ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಬಂದು ಸೋಗಿನ ಮೆರವಣಿಗೆ ಅಂತ್ಯವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.