ಸಿಂದಗಿ: ಆಲಮೇಲ ಹೋಬಳಿಯನ್ನು ತಾಲ್ಲೂಕು ಎಂದು ಘೋಷಣೆ ಮಾಡು ವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ವೇದಿಕೆ ತಾಲ್ಲೂಕು ಘಟಕದ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧ ಎದುರು ಸಿಎಂ ಸಿದ್ದರಾಮಯ್ಯ, ಸಚಿವರಾದ ಕಾಗೋಡು ತಿಮ್ಮಪ್ಪ, ಜಯಚಂದ್ರ, ಎಂ.ಬಿ.ಪಾಟೀಲ ಅವರ ಭಾವಚಿತ್ರಕ್ಕೆ ಗೂಟ ಜಡಿಯುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಸೈಫನ್ ಜಮಾದಾರ, ಜಿಲ್ಲಾ ಘಟಕ ಅಧ್ಯಕ್ಷ ಭೀಮಾಶಂಕರ ಕೋಟಾರಗಸ್ತಿ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಶ್ವನಾಥ ಕೋರಳ್ಳಿ ಮಾತನಾಡಿ, ಆಲಮೇಲ ಪಟ್ಟಣವನ್ನು ತಾಲ್ಲೂಕನ್ನಾಗಿ ರಚನೆ ಮಾಡುವಂತೆ ವಾಸುದೇವ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಸರ್ಕಾರ ಮೀನಮೇಷ ಮಾಡುತ್ತಿರು ವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ವೀರೇಶ ಬಿರಾದಾರ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಅಖಿಲ್ ತಾಂಬೋಳಿ, ಮೈಬೂಬ ಬಾಗವಾನ, ಸದಾನಂದ ಸುಲ್ತಾನಪುರ, ಶಿವಾನಂದ ತಳವಾರ, ಶಿವೂ ಮೇಲಿನ ಮನಿ, ಶರಣಯ್ಯ ನಂದಿಕೋಲ, ಮೋದಿ ನಸಾಬ್ ಕಡಣಿ, ರಮೇಶ ಜಮಾದಾರ, ಸೈಫನ್ ಗೌರ, ದಶರಥ ಬನಸೋಡೆ, ಹಣಮಂತ ಗತ್ತರಗಿ, ಸದ್ದಾಂ ನಧಾಪ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.