ವಡಗೇರಾ : ಆಸ್ತಿಗಾಗಿ ತಾಯಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ ಘಟನೆ ತಾಲ್ಲೂಕಿನ ಗೊಂದೆನೂರು ಗ್ರಾಮದಲ್ಲಿ ನಡೆದಿದೆ.
ಮಗ ಪ್ರಭಯ್ಯ ಸ್ವಾಮಿ ಸೋಮವಾರ ಸಂಜೆ ತಾಯಿ ವಾಸಿಸುತ್ತಿರುವ ಮನಗೆ ನುಗ್ಗಿ ಅಕ್ಕಿ, ಗೋಧಿ, ಜೋಳ, ದವಸ ಧಾನ್ಯ, ಪೀಠೋಪಕರಣ, ಬಟ್ಟೆ, ಸಿಲಿಂಡರ್ ಕಟ್ಟೆಗಳನ್ನು ಧ್ವಂಸ ಮಾಡಿದ್ದಾನೆ.
ಪ್ರಭಯ್ಯ ಸ್ವಾಮಿ ಹೆಸರಿಗೆ 2 ಎಕರೆ ಜಮೀನು ಮತ್ತು ಮನೆ ಮಾಡಿದ್ದೇನೆ. ನನ್ನ ಜೀವನೋಪಾಯಕ್ಕೆಂದು 16 ಗುಂಟೆ ಜಮೀನು ಇಟ್ಟುಕೊಂಡಿದ್ದೇನೆ. ಲಾಕ್ ಡೌನ್ ವೇಳೆ ಕೆಲಸ ಇಲ್ಲದಿದ್ದುದರಿಂದ ಊರಿನ ಪ್ರಮುಖರಲ್ಲಿ ಕೈಸಾಲ ಮಾಡಿಕೊಂಡಿದ್ದೇನೆ. ಅದನ್ನು ತೀರಿಸಲು ನನ್ನ ಪಾಲಿಗೆ ಬಂದ 16 ಗುಂಟೆ ಜಮೀನನ್ನು ಮಾರಲು ಮುಂದಾಗಿದ್ದೇನೆ. ಆದರೆ ನನ್ನ ಮಗ, ಸೊಸೆ, ಮೊಮ್ಮಕ್ಕಳು ಮಾರಲು ಬಿಡುತ್ತಿಲ್ಲ. ಇವರು ನನ್ನ ಜೀವನೋಪಾಯಕ್ಕೆ ಹಣ ಕೂಡ ಕೊಡುತ್ತಿಲ್.ಲ ನನಗೆ ವಯಸ್ಸಾಗಿದೆ ದುಡಿಯಲು ಆಗುತ್ತಿಲ್ಲ. ಜಮೀನು ಮಾರಿದರೆ ನಿನ್ನನ್ನು ಕೊಲ್ಲುತ್ತೇನೆ ಅಂತ ಕೊಡಲಿ ಹಿಡಿದುಕೊಂಡು ಓಡಾಡುತ್ತಿದ್ದಾನೆ. ಮನೆಯೊಳಗೆ ಇದ್ದ ಎಲ್ಲಾ ವಸ್ತುಗಳನ್ನು ಹಾಳು ಮಾಡಿದ್ದಾನೆ ಎಂದು ಅನ್ನಮ್ಮ ಹೇಳಿದರು.
ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ನನ್ನ ಜೀವ ರಕ್ಷಣೆಗಾಗಿ ರಾತ್ರಿ ಮಳೆಯಲ್ಲೇ ನೆನೆದುಕೊಂಡು ಸಮೀಪದ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಭಯ್ಯ ಸ್ವಾಮಿ ವಿರುದ್ಧ ಅರ್ಜಿ ನೀಡಲು ತೆರಳಿದಾಗ ‘ನಿನ್ನ ಮಗನನ್ನು ಕರೆಸಿ ವಿಚಾರಿಸುತ್ತೇವೆ’ ಎಂದು ಹೇಳಿ ನಂತರ ನನಗೆ ಮಗನ ಹೇಳಿಕೆಯಂತೆ ನಡೆಯವಂತೆ ಹೇಳಿದರು. ಆದ್ದರಿಂದ ಅಲ್ಲಿ ನನಗೆ ನ್ಯಾಯ ಸಿಗದು ಎಂದು ಎಸ್.ಪಿ ಕಚೇರಿಗೆ ಬಂದಿದ್ದೇನೆ ಎಂದು ಅನ್ನಮ್ಮ ಮಾಹಿತಿ ನೀಡಿದ್ದಾರೆ.