ಯಾದಗಿರಿ : ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸುಕ್ಷೇತ್ರದ ಪೀಠಾಧಿಪಿತಿ ಗಂಗಾಧರ ಸ್ವಾಮೀಜಿ ನಡೆಸುತ್ತಿರುವ ಅತಿರುದ್ರಯಾಗದಿಂದ ಇಡೀ ವಿಶ್ವಕ್ಕೆ ಕಲ್ಯಾಣವಾಗುತ್ತದೆ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಅಬ್ಬೆತುಮಕೂರಿನಲ್ಲಿ ಸಿದ್ದಿಪುರುಷ ವಿಶ್ವಾರಾಧ್ಯರ ಮೂರ್ತಿ ಪುನರ್ ಬಿಂಬ ಪ್ರತಿಷ್ಠಾಪನ ಸಮಾರಂಭದ ಅಂಗವಾಗಿ ನಡೆಸುತ್ತಿರುವ ಅತಿರುದ್ರಯಾಗದ 6ನೇ ದಿನದ ಪೂಜೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಶ್ವಾರಾಧ್ಯರು ಈ ನಾಡು ಕಂಡ ಪುಣ್ಯಪುರುಷರಾಗಿದ್ದಾರೆ. ಅಂತಹ ಮಹಾಮಹಿಮನ ಆಶೀರ್ವಾದದೊಂದಿಗೆ ಇಂದಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನಡೆಸುತ್ತಿರುವ ಈ ಹೋಮ ಹವನಗಳ ಧಾರ್ಮಿಕ ಕಾರ್ಯಕ್ರಮಗಳಿಂದ ಎಲ್ಲರಲ್ಲಿಯೂ ಸಂತೃಪ್ತಿಭಾವ ಮೂಡಿ ಭಕ್ತಿಯ ಬೀಜಾಂಕುರವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸರ್ವಸಮಾನತೆಯ ಹರಿಕಾರ ಬಸವಣ್ಣನವರ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಈ ಮಠದಲ್ಲಿ ಸಾಕಾರಗೊಳ್ಳುತ್ತದೆ. ಭಕ್ತ ಜನರಲ್ಲಿ ಕಾಯಕದ ಮಹತ್ವವನ್ನು ತಿಳಿಸಿಕೊಡುತ್ತಾ ಶ್ರೀಮಠದಲ್ಲಿ ನಿರಂತರವಾದ ಅನ್ನದಾಸೋಹ ಮಾಡತ್ತಿರುವುದು ಈ ಮಠದ ಅಗ್ಗಳಿಕೆ ಎಂದು ಹೇಳಿದರು.
ವರ್ತಮಾನದ ವ್ಯವಸ್ಥೆಯಲ್ಲಿ ಮನುಷ್ಯ ಅನೇಕ ಒತ್ತಡಗಳ ಮಧ್ಯೆ ಬದುಕು ಸಾಗಿಸುತ್ತಿದ್ದಾನೆ. ಈ ಒತ್ತಡಗಳಿಂದ ಮುಕ್ತಿ ಹೊಂದಲು ಪ್ರತಿಯೊಬ್ಬರು ಗುಡಿ ಗುಂಡಾರಗಳನ್ನು ಸುತ್ತುತ್ತಾರೆ. ಕ್ಷೇತ್ರ ದರ್ಶನಗಳಿಂದ ಶಾಂತಿ, ನೆಮ್ಮದಿ ಪಡೆಯಲು ಹವಣಿಸುತ್ತಾರೆ. ಈ ಹಿನ್ನಲೆಯಲ್ಲಿ ಅಬ್ಬೆತುಮಕೂರಿನ ಮಠ ಎಲ್ಲ ಜಾತಿ ಸಮುದಾಯದವರನ್ನು ಒಂದೇ ಎಂಬ ಭಾವದಲ್ಲಿ ಕಾಣುತ್ತಾ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಿರುವುದು ಉತ್ತಮ ಪರಿಪಾಠ ಎಂದು ಹೇಳಿದರು.
ಮಠಾಧಿಪತಿ ಗಂಗಾಧರ ಸ್ವಾಮೀಜಿ ಮಾತನಾಡಿ, ಅರ್ಚನೆ ಪ್ರಾರ್ಥನೆಗಳಿಂದ ಮನುಷ್ಯನ ಭಾವ ಶುದ್ಧವಾಗುತ್ತದೆ. ಆ ಹಿನ್ನಲೆಯಲ್ಲಿ ಅತಿರುದ್ರಯಾಗ ಮತ್ತು ಅಷ್ಟಲಕ್ಷ್ಮೀ ಕುಬೇರ ಪೂಜೆ ಕೈಗೊಳ್ಳುತ್ತಿದ್ದು, ಅದರಲ್ಲಿ ಪಾಲ್ಗೊಳ್ಳುತ್ತಿರುವ ಅನೇಕ ಜನರಿಗೆ ಈ ಪೂಜಾಕೈಂಕರ್ಯದಿಂದ ಪುಣ್ಯಪ್ರಾಪ್ತಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿಯ ಸುಲಫಲ ಮಠದ ಸಾರಂಗಧರ ಶಿವಾಚಾರ್ಯ ಸ್ವಾಮೀಜಿ, ಸೊನ್ನ ದಾಸೋಹ ಮಠದ ಶಿವಾನಂದ ಸ್ವಾಮೀಜಿ, ಶಹಾಪುರದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ಪಾಳಾ ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸೊಲ್ಲಾಪುರದ ಸಿದ್ದರಾಮ ಮೇತ್ರೆ, ಪ್ರಭಾವತಿ ಧರ್ಮಸಿಂಗ್, ಡಾ.ಸುಭಾಶ್ಚಂದ್ರ ಕೌಲಗಿ, ಗವ್ವಮಠಂ ವಿಶ್ವನಾಥ ಶಾಸ್ತ್ರಿ, ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ, ಬಸವರಾಜ ಶಾಸ್ತ್ರಿ ಎಲೆಕೂಡ್ಲಗಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.