ಯಾದಗಿರಿ: ವ್ಯಾಸರಾಜರ ವೃಂದಾವನ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘ ಆಗ್ರಹಿಸಿದೆ.
ಗುರುವಾರ ನಗರದ ಗುರುರಾಜ ಪರಿಮಳ ಮಂಟಪದಲ್ಲಿ ನವವೃಂದಾವನ ಗಡ್ಡಿಯಲ್ಲಿ ವೃಂದಾವನ ಧ್ವಂಸಗೊಳಿಸಿದ ಪ್ರಕರಣದ ಬಗ್ಗೆ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ರಾವ್ ಮುಂಡರಗಿ ಮಾತನಾಡಿದರು.
‘ವ್ಯಾಸರಾಜರು ಕನ್ನಡ ನಾಡಿನ ಮುಕುಟಪ್ರಾಯವಾದ ಹಂಪಿಯ ವಿಜಯನಗದ ಕೃಷ್ಣದೇವರಾಯನ ಆಸ್ಥಾನದ ರಾಜಗುರುಗಳಾಗಿದ್ದವರು. ಅಂತಹ ಯತಿಗಳ ವೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಹಿಂದೂ ಧರ್ಮ ಅನುಯಾಯಿಗಳಿಗೆ ನೋವು ತರಿಸಿದೆ’ ಎಂದು ಹೇಳಿದರು.
ಪಂಡಿತ ನರಸಿಂಹಾಚಾರ್ಯ ಪುರಾಣಿಕ ಮಾತನಾಡಿ, ‘ಈ ಘಟನೆ ಖಂಡಿಸಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.
ಶಂಕರನಾರಾಯಣ ಕುಲಕರ್ಣಿ, ಮುಖಂಡ ನರಸಿಂಹರಾವ್ ಕಿಲ್ಲನಕೇರಾ ಇದ್ದರು.