ಶಹಾಪುರ: ನಗರ ವ್ಯಾಪ್ತಿಯಲ್ಲಿ ಶನಿವಾರ ಬೆಳಗಿನ ಜಾವ ಆಲಿಕಲ್ಲು ಮಳೆಯಿಂದ ಹೆಚ್ಚಿನ ಹಾನಿ ಉಂಟಾಗಿದೆ. ರಭಸವಾಗಿ ಆಲಿಕಲ್ಲು ಬಿದ್ದಿದ್ದರಿಂದ ಎಳೆಮೊಗ್ಗಿನಂತೆ ಇದ್ದ ಮಾವು, ತೋಟಗಾರಿಕೆ ಬೆಳೆ ಕಪ್ಪಾಯಿ ಸೇರಿದಂತೆ ಹೆಚ್ಚಿನ ವಾಣಿಜ್ಯ ಬೆಳೆ ನಷ್ಟ ಆಗಿದೆ.
ಕಲ್ಲಿನಿಂದ ಹೊಡೆದಂತೆ ಬೆಳೆಗೆ ತಾಗಿದ್ದರಿಂದ ಪಪ್ಪಾಯಿ, ಮಾವು, ಸಜ್ಜೆ ಹೀಗೆ ವಿವಿಧ ಬೆಳೆ ನಷ್ಟ ಉಂಟಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ತಿಳಿಸಿದರು.
ನಾನು 20 ಎಕರೆ ಜಮೀನು ಲೀಜ್ ಪಡೆದುಕೊಂಡು ಪಪ್ಪಾಯಿ, ದಾಳಿಂಬೆ ಹಾಗೂ ವಿಳ್ಯದಲೆ ಬಿತ್ತನೆ ಮಾಡಿದ್ದೆ, ಆಲಿಕಲ್ಲು ಮಳೆಯ ರಭಸಕ್ಕೆ ಪಪ್ಪಾಯಿ ಕಾಯಿ ನೆಲಕ್ಕೆ ಬಿದ್ದಿವೆ. ದಾಳಿಂಬೆ ಹೂ ಉದುರಿವೆ. ಅಲ್ಲದೆ ವಿಳ್ಯದೆಲೆ ಕೀಳಲು ಆರಂಭಿಸಿದ್ದೆವು ಎಲೆಯು ಕೂಡಾ ಹಾಳಾಗಿದೆ. ಏಕಾಏಕಿ ಸುರಿದ ಮಳೆಯು ನಷ್ಟವನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಆಗಮಿಸಿ ಕೊನೆ ಪಕ್ಷ ನಷ್ಟದ ಪ್ರಮಾಣವನ್ನು ಸಮೀಕ್ಷೆ ಮಾಡಬೇಕು ಎನ್ನುತ್ತಾರೆ ರೈತ ಜಾಕೀರ್ ಹುಸೇನ್ ಮುನ್ಸಿ.
ಹಿಂಗಾರು ಬೆಳೆಯಾದ ಸಜ್ಜೆ ಕಾಯಿ ಕಟ್ಟುವ ಹಂತದಲ್ಲಿ ಇದ್ದಾಗ ಮಳೆಯ ಹೊಡೆತ ಅನುಭವಿಸಿದೆ. ಶೇಂಗಾ ಬೆಳೆಯು ಹಾಳಾಗಿದೆ. ಜಾನುವಾರುಳಿಗೆ ಮೇವು ಆಗುತ್ತದೆ ಎನ್ನುವ ಭರವಸೆ ಹುಸಿಯಾಗಿದೆ. ಅಲ್ಲದೆ ಗುಂಟೂರ, ಬ್ಯಾಡಗಿ ಮೆಣಸಿನಕಾಯಿ ಬೆಳೆಯು ಮಳೆಯ ಹನಿಯ ರಭಸದಿಂದ ಹಸಿ ಮೆಣಸಿನಕಾಯಿ ನೀರು ಪಾಲಾಗಿವೆ. ಜಿಲ್ಲಾಧಿಕಾರಿಯು ಈಗಾಗಲೇ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಹಾನಿಯ ವರದಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಿ ವಿಶೇಷ ಪ್ರಕರಣವೆಂದು ಪರಿಹಾರ ಒದಗಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಲಿಕಲ್ಲು ಮಳೆಯಿಂದ ಹಾನಿ ಅನುಭವಿಸಿದ ರೈತರು ಮನವಿ ಮಾಡಿದ್ದಾರೆ.
ಪಕ್ಷಿಗಳು ಸಾವು: ನಗರದ ಕೋರ್ಟ್ ಆವರಣದಲ್ಲಿ ಹೆಚ್ಚಿನ ಗಿಡಗಳು ಬೆಳೆದು ನಿಂತಿದ್ದರಿಂದ ಪಕ್ಷಿಗಳಿಗೆ ಆಸರೆ ತಾಣವಾಗಿದೆ. ಅದರಲ್ಲಿ ಬೆಳ್ಳಕ್ಕಿ ಹಾಗೂ ವಿವಿಧ ತಳಿಯ ಪಕ್ಷಿಗಳು ಗೂಡಿಕಟ್ಟಿಕೊಂಡು ವಾಸಿಸುತ್ತಿವೆ. ಆದರೆ ಶನಿವಾರ ಸುರಿದ ಆಲಿಕಲ್ಲು ರಭಸಕ್ಕೆ ಚಿಕ್ಕ ಮರಿಗಳು ಸಾವನ್ನಪ್ಪಿವೆ. ಬೆಳಗಿನ ಜಾವ ನೀರಿನಲ್ಲಿ ತೇಲಿ ಕೊಂಡು ಬರುತ್ತಿರುವುದನ್ನು ಕಂಡು ಮನ ಕಲುಕಿತು ಎನ್ನುತ್ತಾರೆ ವಕೀಲ ಯೂಸೂಫ್ ಸಿದ್ದಕಿ, ಮಲ್ಕಪ್ಪ ಪಾಟೀಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.