ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕು ವ್ಯಾಪ್ತಿಯಲ್ಲಿ ಶನಿವಾರ ಬೆಳಗಿನ ಜಾವ ಸುರಿದ ಆಲಿಕಲ್ಲು ಮಿಶ್ರಿತ ಮಳೆಯಿಂದ ಶೇಂಗಾ, ಮೆಣಸಿನಕಾಯಿ, ಜೋಳ, ಸಜ್ಜೆ, ಟೊಮೆಟೊ ಬೆಳೆ ಹಾನಿಯಾಗಿದೆ.
ಶಹಾಪುರ ನಗರದ ವ್ಯಾಪ್ತಿಯಲ್ಲಿ 49 ಎಂಎಂ ಮಳೆಯಾಗಿದೆ. ಇದರಿಂದ ನಗರದ ತಗ್ಗು ಪ್ರದೇಶದ ಮನೆಗೆ ನೀರು ನುಗ್ಗಿವೆ. ದೋರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 44 ಮಿಲಿ ಮೀಟರ್ ಮಳೆಯಾಗಿದೆ. ಧಾರಣಿ ಇಲ್ಲದ ಕಾರಣ ಸಂಗ್ರಹಿಸಿಟ್ಟಿದ್ದ ಹತ್ತಿ ಮಳೆಗೆ ಆಹುತಿ ಆಗಿದೆ. ಸುಂಕು ಕಟ್ಟುವ ಹಂತದಲ್ಲಿದ್ದ ಭತ್ತ, ಸಜ್ಜೆ ಜೋಳ್ಳು ಆಗುವ ಭೀತಿ ಎದುರಾಗಿದೆ.
‘ಸಜ್ಜೆ 6 ಎಕರೆ, ಮೆಣನಕಾಯಿ 4 ಎಕರೆಯಲ್ಲಿ ಬೆಳೆದಿದ್ದೇವು. ಆಲಿಕಲ್ಲು ಮಳೆಯಿಂದ ಬೆಳೆ ಹಾಳಾಗಿದೆ. ಅಧಿಕಾರಿಗಳು ಇನ್ನೂ ಬಂದಿಲ್ಲ. ಕೂಡಲೇ ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ದೋರನಹಳ್ಳಿಯ ರೈತ ಕಿಶನ್ ರಾಥೋಡ್ ಆಗ್ರಹಿಸಿದರು.
‘ಅಕಾಲಿಕ ಮಳೆಯಿಂದ ಜಮೀನಿನಲ್ಲಿದ್ದ ವಿವಿಧ ಬೆಳೆ ಹಾಳಾಗಿದೆ. ಕೂಡಲೇ ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಅಶೋಕ ಒತ್ತಾಯಿಸಿದ್ದಾರೆ.