ಸೈದಾಪುರ: ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ರೂಢಿ ಪಾಠ ಯೋಜನೆಯು ಪ್ರಶಿಕ್ಷಣಾರ್ಥಿಗಳಿಗೆ ಭದ್ರ ಬುನಾದಿ ಒದಗಿಸುತ್ತದೆ ಎಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವರಾಜಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಡಿಎಲ್ಇಡಿ ಪ್ರಶಿಕ್ಷಣಾರ್ಥಿಗಳು ಆಯೋಜಿಸಿದ ರೂಢಿ ಪಾಠ ಯೋಜನೆಯ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆ ಮಾಡುವ ಕೌಶಲವನ್ನು ಪ್ರಶಿಕ್ಷಣಾರ್ಥಿಗಳಿಗೆ ರೂಢಿ ಪಾಠ ಯೋಜನೆ ಕಲಿಸುತ್ತದೆ. ಮಕ್ಕಳ ಆಸಕ್ತಿಯನ್ನು ಪಾಠದ ಕಡೆ ಕೇಂದ್ರೀಕರಿಸುವುದಕ್ಕೂ ಸಹಕಾರ ನೀಡುತ್ತದೆ ಎಂದರು.
ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವ ಮಾನದಂಡವಾಗುತ್ತದೆ. ಹೀಗಾಗಿ, ಪ್ರಶಿಕ್ಷಣಾರ್ಥಿಗಳು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.