ಯಾದಗಿರಿ:‘ಆಸ್ಪತ್ರೆಗೆ ಉಪಚಾರಕ್ಕೆ ಬರುವ ರೋಗಿಗಳನ್ನು ಗುಣಪಡಿಸುವ ವೈದ್ಯರು ದ್ವೀತಿಯ ಬ್ರಹ್ಮರಿದ್ದಂತೆ. ಅದಕ್ಕಾಗಿ ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ’ ಎಂದು ಅಬ್ಬೆತುಮಕೂರಿನಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕೋರ್ಟ್ ರಸ್ತೆಯಲ್ಲಿ ಶರಣಬಸವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.
‘ವೈದ್ಯರು ರೋಗಿಗಳ ಜತೆ ಶಾಂತಿ, ಸೌಹಾರ್ದ, ಸಹನೆ, ಸಮಾಧಾನ ಚಿತ್ತದಿಂದ ವರ್ತಿಸಬೇಕು. ಆತ್ಮೀಯವಾಗಿ ಮಾತನಾಡಬೇಕು. ಆಗ ರೋಗಿಗಳಿಗೆ ವೈದ್ಯರಲ್ಲಿ ಭರವಸೆ ಮೂಡುತ್ತದೆ. ಅಲ್ಲದೆ ಇಂಥ ಮಾತುಗಳಿಂದ ರೋಗಿಯ ಅರ್ಧ ಕಾಯಿಲೆ ವಾಸಿಯಾಗುತ್ತದೆ’ ಎಂದು ಹೇಳಿದರು.
‘ವೈದ್ಯರು ಎಲ್ಲವನ್ನು ವ್ಯವಹಾರಿಕವಾಗಿ ನೋಡದೇ ರೋಗಿ ಬಗ್ಗೆ ಕಾಳಜಿ ಪೂರಕವಾಗಿ ಚಿಕಿತ್ಸೆ ನೀಡಬೇಕು. ವೈದ್ಯರ ವೃತ್ತಿ ಪವಿತ್ರವಾಗಿದ್ದು, ಸಾಮಾಜಿಕ ಜಾವಬ್ದಾರಿಹೊಂದಿದೆ ಎಂಬ ಅರಿವು ವೈದ್ಯರಿಗೆ ಅವಶ್ಯಕತೆ ಇದೆ’ ಎಂದು ತಿಳಿಸಿದರು.
‘ಆಸ್ಪತ್ರೆಯು ಬಡವರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಿ. ಅಲ್ಲದೆ ಆಸ್ಪತ್ರೆ ವೈದ್ಯಾಧಿಕಾರಿಗಳು ರೋಗಿಗಳನ್ನು ಪ್ರೀತಿಯಿಂದ ಕಾಣಿರಿ. ಈ ಮೂಲಕ ಆಸ್ಪತ್ರೆಗೆ ಬರುವರೋಗಿಗಳು ಶೀಘ್ರ ಗುಣಮುಖರಾಗಲಿ’ ಎಂದರು.
‘ಎಚ್.ಸಿ.ಜಿ.ಕ್ಯಾನ್ಸರ್ ಕೇರ್ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ಗೆ ಸಂಬಂಧಿಸಿದ ರೋಗಕ್ಕೆ ತಜ್ಞ ವೈದ್ಯರಿಂದ ಗುಣಮಟ್ಟದ ಸೌಲಭ್ಯ ದೊರೆಯುವುದು’ ಎಂದು ಡಾ.ಶರಣಬಸಪ್ಪ ಯಲ್ಹೇರಿ ಹೇಳಿದರು.
ವಾರಾಣಾಸಿ ಹಿರೇಮಠ, ಯಲ್ಹೇರಿ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ವೇಳೆಡಾ.ವೀರಭದ್ರಪ್ಪ ಯಲ್ಹೇರಿ, ಡಾ.ಪವಿತ್ರ, ಡಾ.ಸುಭಾಷಪಾಟಿಲ, ಡಾ. ಜಯಲಕ್ಷ್ಮಿ, ಡಾ.ಶೈಲಜಾ, ಡಾ.ವಿನಾಯಕ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಇದ್ದರು.