ಗುರುಮಠಕಲ್: ಅಪಘಾತ, ತೀವ್ರ ಆರೋಗ್ಯ ಸಮಸ್ಯೆಯಂತಹ ಸಂದರ್ಭದಲ್ಲಿ ರೋಗಿಗಳ ನೆರವಿಗೆ ಧಾವಿಸುವಲ್ಲಿ ಆಂಬುಲೆನ್ಸ್ಗಳು ವಿಫಲವಾಗುತ್ತಿವೆ.
ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಒಂದೇ ಒಂದುಹಳೆಯ ಆಂಬುಲೆನ್ಸ್ ಇದ್ದು, ಅದು ಯಾವುದಾದರೂತಾಂತ್ರಿಕ ಸಮಸ್ಯೆಯಲ್ಲಿರುತ್ತದೆ. ಸಮಯಕ್ಕೆ ಸರಿಯಾಗಿ ರೋಗಿಗಳನ್ನು ತಲುಪುತ್ತಿಲ್ಲ. ಸಕಾಲದಲ್ಲಿ ಅದರ ಸೇವೆ ಸಿಗದ ಕಾರಣ ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗಳಿಗೆ ತೆರಳಿದ ಉದಾಹರಣೆಗಳಿವೆ. ಕೆಲವೊಮ್ಮೆರೋಗಿಗಳಿಗೆ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದೂ ಇದೆ ಎಂದು ಮಹಾದೇವ ಎಂಟಿಪಲ್ಲಿ ಹಾಗೂ ಯಲ್ಲಪ್ಪ ದೂರಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಂತ್ರಿಕ ಸಿಬ್ಬಂದಿ, ಲ್ಯಾಬ್ ತಜ್ಞರ, ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ. ಬೇರೆಡೆ ಚಿಕಿತ್ಸೆಕೊಡಿಸಲು ಆಂಬುಲೆನ್ಸ್ ಆದರೂ ಒದಗಿಸಲು ಸಂಬಂಧಪಟ್ಟವರು ಗಮನಹರಿಸಬೇಕು. ಈ ಮೂಲಕ ಬಡ ರೋಗಿಗಳ ಜೀವರಕ್ಷಣೆ ಮಾಡಬೇಕು ಎಂದು ಹೊರ ರೋಗಿಗಳಾದ ಭೀಮವ್ವ, ಮಹೇಶ, ರಾಮಪ್ಪ ಮನವಿ ಮಾಡಿದರು.
ಶುಕ್ರವಾರ ಬೂದೂರು ಕ್ರಾಸ್ ಬಳಿ ವಿದ್ಯಾರ್ಥಿಗಳಿದ್ದ ವಾಹನ ಅಪಘಾತಕ್ಕೀಡಾಯಿತು. ಆ ವೇಳೆ ಗಾಯಾಳುಗಳನ್ನು ಟ್ರ್ಯಾಕ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಟ್ಟಣ ಹತ್ತಿರವೇ ಇದ್ದಿದ್ದರಿಂದ ಯಾವುದೇ ಪ್ರಾಣಪಾಯ ಸಂಭವಿಸಲಿಲ್ಲ. ದೂರದಲ್ಲಿ ಇದ್ದಿದ್ದರೇ ಗಾಯಾಳುಗಳ ಸ್ಥಿತಿ ಹೇಗೆ ಎಂದು ನಿವಾಸಿ ರವಿ ಮತ್ತು ಸಂಜೀವ ಪ್ರಶ್ನಿಸಿದರು.
ಪೆಟ್ರೋಲ್ ಬಂಕ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಆಂಬುಲೆನ್ಸ್ಗೆ ನಿರಂತರ ಡಿಸೇಲ್ ಪೂರೈಕೆ ಆಗಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದರು.
‘ಆಂಬುಲೆನ್ಸ್ ಸೇವೆಯನ್ನು ಬಿಪಿಎಲ್ ಕಾರ್ಡುದಾರರಿಗೆ ಉಚಿತ ಮತ್ತು ಎಪಿಎಲ್ ಕಾರ್ಡ್ದಾರರು ಡಿಸೇಲ್ ಹಾಕಿಸಿಕೊಂಡು ಹೋಗಬೇಕು ಎಂಬ ನಿಯಮವಿದೆ. ಅಧಿಕಾರಿಗಳು ಮುತವರ್ಜಿ ವಹಿಸಿದ್ದರೇ ಶುಕ್ರವಾರ ಅಂಥ ಘಟನೆ ನಡೆಯುತ್ತಿರಲಿಲ್ಲ. ಜನರ ಹಿತದೃಷ್ಟಿಯಿಂದ ನಿಯಮಗಳ ವ್ಯಾಪ್ತಿಯಲ್ಲಿ ಏನು ಮಾಡಬಹುದು ಎಂಬುದನ್ನು ಪರಿಶೀಲಿಸುತ್ತೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ 'ಪ್ರಜಾವಾಣಿ'ಗೆ ತಿಳಿಸಿದರು.
***
ತುರ್ತು ಸಮಯದಲ್ಲಿ ಜೀವ ಉಳಿಸುವ ವಾಹನ ಆಂಬುಲೆನ್ಸ್, ಅಗತ್ಯವಾದ ಸಂದರ್ಭದಲ್ಲಿ ಎಷ್ಟೇ ಪ್ರಯತ್ನಿಸಿದರೂಸಿಗುವುದಿಲ್ಲ
ಸಂಜೀವ ಅಳೆಗಾರ, ಸ್ಥಳೀಯ ನಿವಾಸಿ
***
ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಮತ್ತು ತಾಂತ್ರಿಕ ಸಿಬ್ಬಂದಿಯ ಕೊರತೆ ಇದೆ. ಚಿಕಿತ್ಸೆಗಾಗಿ ರೋಗಿಗಳು ಅನುವಾರ್ಯವಾಗಿ ಬೇರೆಡ ಹೋಗಬೇಕಿದೆ
ನಾಗೇಶ ಗದ್ದಗಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.