ಹೆಡಗಿಮದ್ರ (ಯರಗೋಳ): ಗ್ರಾಮದ ಶ್ರೀ ಶಾಂತ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಭಕ್ತರ ಹರಕೆಯ ತನಾರತಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಮಂದಿರದಿಂದ ಮೆರವಣಿಗೆ ಮೂಲಕ ಹೊರಟ ಪಲ್ಲಕ್ಕಿ ಹೊಳೆ ತಲುಪಿತು. ಮರಳಿ ಬರುವಾಗ ಸಾವಿರಾರು ಸಂಖ್ಯೆಯ ಮಹಿಳೆಯರು ತಲೆಯ ಮೇಲೆ ಹಿಟ್ಟಿನ ತಟ್ಟೆಯಲ್ಲಿ ಎಣ್ಣೆ ಹಾಕಿದ ದೀಪವನ್ನು ಹೊತ್ತು, ಪೀಠಾಧಿಪತಿ ಪಂಡಿತಾರಾಧ್ಯ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರ ನೇತೃತ್ವದಲ್ಲಿ ಶ್ರೀ ಶಾಂತ ಶಿವಯೋಗಿಗಳ ಗದ್ದುಗೆ 5 ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಉತ್ಸವ ಉತ್ಸವ ಜರುಗಿತು.
ಭಕ್ತರು, ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ಭಜನೆ, ಡೊಳ್ಳು, ನೃತ್ಯ ತಂಡಗಳ ಕುಣಿತ ಜೋರಾಗಿತ್ತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಬೂಂದಿ, ಗೋಧಿ ಹುಗ್ಗಿ, ಅನ್ನ ,ಸಾಂಬಾರ್ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರೆಯ ಅಂಗವಾಗಿ ಶಾಲೆಯ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹೊನಲು- ಬೆಳಕಿನ ಕಬ್ಬಡ್ಡಿ ಟೂರ್ನಿ ಆಯೋಜಿಲಾಗಿತ್ತು.
ಮಂಗಳವಾರ ನಸುಕಿಗೆ ಬೆಂಗಳೂರು ಮತ್ತು ಬೆಳಗಾವಿ ಮೂಲದ ವಿದ್ವಾನ್ ಚಂದ್ರಶೇಖರ್ ಶಾಸ್ತ್ರಿ ಹಾಗೂ ಶಿವಯೋಗಿ ಶಾಸ್ತ್ರಿಗಳ ನೇತೃತ್ವದ 20 ಜನ ಪಂಡಿತರು, ಬ್ರಾಹ್ಮಿ ಮುಹೂರ್ತದಲ್ಲಿ ರೈತರಿಗೆ, ಯೋಧರಿಗೆ, ವಿಶ್ವಕ್ಕೆ ಶಾಂತಿ ದೊರಕಲು ಚಂಡಿಕೆಯಾಗ ಆರಂಭಗೊಂಡಿತು.
ಅಲ್ಲಿಪುರ, ಕಂಚಗಾರಹಳ್ಳಿ, ಚಾಮನಹಳ್ಳಿ, ಠಾಣಗುಂದಿ, ತಳಕ, ತಂಗಡಗಿ, ಬಸವಂತಪುರ, ತಳಕ್, ತಂಗಡಗಿ, ಅಚೋಲ, ಹೊರುಂಚಾ, ಅಬ್ಬೆತುಮಕೂರು, ಮುದ್ನಾಳ, ಅರಿಕೇರಾ (ಬಿ), ಗ್ರಾಮದ ಭಕ್ತರು ಭಾಗವಹಿಸಿದ್ದರು.
ಮುಖಂಡರಾದ ರಾಚಣಗೌಡ ಮುದ್ನಾಳ, ವೈದ್ಯರಾದ ಸಿ.ಎಂ. ಪಾಟೀಲ, ಸಂಗಮೇಶ ಕೆಂಭಾವಿ, ವಿರುಪಾಕ್ಷಯ್ಯ ಸ್ವಾಮಿ, ಅನಂತು, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ರಾಜಕುಮಾರ ಜಾಮಗೊಂಡ, ಎಎಸ್ಐ ಭೀಮಾಶಂಕರ್, ಠಾಣಗುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಶಾಪುರ್ಕರ್, ಪೊಲೀಸ್ ಸಿಬ್ಬಂದಿ ಮೋನಪ್ಪ, ಶರಣಗೌಡ ಇದ್ದರು.