ಯರಗೋಳ (ಯಾದಗಿರಿ ಜಿಲ್ಲೆ): ಶುಕ್ರವಾರ ರಾತ್ರಿ ಸುರಿದ ಜೋರಾದ ಮಳೆಯಿಂದಾಗಿ ಗ್ರಾಮದ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಗ್ರಾಮಸ್ಥರು ಸಂತಸದಲ್ಲಿದ್ದಾರೆ. ಈ ಮುಂಚೆ 2010ರಲ್ಲಿ ಕೆರೆ ತುಂಬಿತ್ತು.
ಕಳೆದ ಹತ್ತು ವರ್ಷಗಳಿಂದಲೂ ಸತತ ಬರಗಾಲ, ಮಳೆ ಅಭಾವದಿಂದ ಕೆರೆ ತುಂಬದ ಕಾರಣ ರೈತರು ನಿರಾಶೆಯಲ್ಲಿದ್ದರು.
ನೂರಾರು ಸಂಖ್ಯೆಯಲ್ಲಿ ಯುವಕರು, ಜಿಟಿ ಜಿಟಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ, ಗೆಳೆಯರೊಂದಿಗೆ ಕೆರೆಯ ಕೋಡಿಯ ಮೇಲೆ ಹರಿಯುವ ನೀರಿನಲ್ಲಿ ನಿಂತು, ಮೊಬೈಲ್ ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ಫೇಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.
ಗ್ರಾಮದ ಹಿರಿಯರಾದ ಸಾಹೇಬ್ ಗೌಡ ಗಾಂಪಲಿ ಮಾತನಾಡಿ, '10 ವರ್ಷಗಳ ನಂತರ ಕೆರೆ ತುಂಬಿದ್ದು, ರೈತರಿಗೆ ಸಂತಸ ತಂದಿದೆ. ಕೆರೆಗೆ ಹೊಸ ನೀರು ಬಂದಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ದೇವರುಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಗದ್ದೆಗಳಲ್ಲಿ ಭತ್ತದ ನಾಟಿ ಮಾಡುತ್ತೇವೆ' ಎಂದರು.
ಗ್ರಾಮದ ಸೂರ್ಯಕಾಂತ ಜೋಗಿ, ಸಾಬಣ್ಣ ಬಾನರ, ಮಲ್ಲಿಕಾರ್ಜುನ ಬಳ್ಳೊಳ್ಳಿ, ವಿಜಯಕುಮಾರ ದಿಬ್ಬಾ, ರಾಕೇಶ್, ಸೋಮನಾಥ ಪೊಲೀಸ್ ಪಾಟೀಲ, ಸಿದ್ದು ಬನ್ನಟ್ಟಿ, ಲಕ್ಷ್ಮಣ ಹತ್ತಿಕುಣಿ, ರಾಘವೇಂದ್ರ ಹಿರಿಕೇರಿ ಸೇರಿದಂತೆ ಅನೇಕರು ಇದ್ದರು.
ಕೆರೆಯ ಅಂಕಿ- ಅಂಶಗಳು
*24 ಚದರ ಕಿಲೋ ಮೀಟರ್ ಕೆರೆಯ ಜಲಾನಯನ ಪ್ರದೇಶ.
*129.28 ಹೆಕ್ಟೇರ್ ನೀರು ನಿಲ್ಲುವ ಪ್ರದೇಶ
* 5.08 ಕ್ಯುಬೆಕ್ ಮೀಟರ್ ನೀರಿನ ಸಾಮರ್ಥ್ಯ
* 364 ಮೀಟರ್ ಕೆರೆಯ ಒಡ್ಡು ಪ್ರದೇಶ,
*202 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಸೌಲತ್ತು.