ಯಾದಗಿರಿ: ನಗರದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆದ ಒಂದೂವರೆ ತಿಂಗಳಲ್ಲೇ ಡಾಂಬರು ಕಿತ್ತಿ ಬಂದಿದೆ.
ನಗರದ ಎಲ್ಐಸಿ ಕಚೇರಿ ಮುಂಭಾಗ ಡಾಂಬಾರು ಕಿತ್ತಿ ಬಂದಿದ್ದು, ಕಳಪೆ ಕಾಮಗಾರಿ ನಡೆದಿದೆಯೇ ಎನ್ನುವುದು ನಾಗರೀಕರ ಪ್ರಶ್ನೆಯಾಗಿದೆ.
ಡಾಂಬರೀಕರಣ ಆಗುವುದಕ್ಕಿಂತ ಮುಂಚಿತವಾಗಿ ಆ ಸ್ಥಳದಲ್ಲಿ ಆಳವಾದ ಗುಂಡಿಗಳು ಬಿದ್ದಿದ್ದವು. ಪ್ರತಿವರ್ಷವೂ ಮಳೆಗಾಲದಲ್ಲಿ ಅಲ್ಲಿಯೇ ಆಳುದ್ದ ಗುಂಡಿಗಳು ಬೀಳುತ್ತಿದ್ದವು. ಈಗ ಡಾಂಬರೀಕರಣ ಮಾಡಿದರೂ ಗುಂಡಿ ಬಿದ್ದಿದೆ.
ನಗರದ ವೈದ್ಯಕೀಯ ಕಾಲೇಜಿನಿಂದ ಮುಂಡರಗಿವರೆಗೆ ಸುಮಾರು 13 ಕಿ.ಮೀ. ರಸ್ತೆ ದುರಸ್ತಿಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದ ಗುತ್ತಿಗೆದಾರ ಆರಂಭದಲ್ಲಿ ರಸ್ತೆ ಉದ್ದಕ್ಕೂ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವಂತ ಕೆಲಸ ಮಾಡಿದ್ದಾರೆ. ಬಳಿಕ ಎರಡು ಪದರು ಡಾಂಬರು ಹಾಕಿ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ.
ದಾವಣಗೆರೆ ಮೂಲದ ಗುತ್ತಿಗೆದಾರ ಎಲ್.ಕಾಶಿರೆಡ್ಡಿ ಎನ್ನುವವರಿಗೆ ಸುಮಾರು ₹12 ಕೋಟಿಗೆ ಕೆಲಸ ವಹಿಸಲಾಗಿತ್ತು. ಆದರೆ, ಕಳೆದ ಒಂದೂವರೆ ತಿಂಗಳಲ್ಲೇ ರಸ್ತೆ ಗುಂಡಿ ಬಿದ್ದಿದ್ದು, ಗುಣಮಟ್ಟದ ಕಾಮಗಾರಿ ಆಗಿಲ್ಲವೇ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
‘ರಸ್ತೆ ಕಾಮಗಾರಿ ಇಷ್ಟು ಬೇಗ ಹಾಳಾಗಿರುವುನ್ನು ನೋಡಿದರೆ ಯಾವ ರೀತಿ ಕಾಮಗಾರಿ ಆಗಿದೆ ಎನ್ನುವುದು ಊಹಿಸಲು ಅಸಾಧ್ಯ. 13 ಕಿ.ಮೀಗೆ ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ. ಆದರೆ, ರಸ್ತೆ ಈ ರೀತಿ ಗುಂಡಿ ಬಿದ್ದಿರುವುದು ಮಳೆಬಂದರೆ ಮತ್ತಷ್ಟು ಹಾಳಾಗುವ ಸಾಧ್ಯತೆ ಇದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮಕೈಗೊಂಡು ಗುಣಮಟ್ಟದ ದುರಸ್ತಿ ಮಾಡಿಸಬೇಕು’ ನಗರ ನಿವಾಸಿ ಚಂದ್ರಶೇಖರ ಹೊಸಮನಿ ಆಗ್ರಹಿಸಿದ್ದಾರೆ.
‘ಹೆದ್ದಾರಿಯಲ್ಲಿ ಡಾಂಬರು ಕಿತ್ತು ಬಂದಿರುವುದು ಗಮನಕ್ಕೆ ಬಂದಿದೆ. ರಸ್ತೆ ಗುತ್ತಿಗೆ ತೆಗೆದುಕೊಂಡವರಿಗೆ ಮಾಹಿತಿ ನೀಡಿ ಅವರಿಂದ ದುರಸ್ತಿ ಮಾಡಿಸಲಾಗುತ್ತಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಯಾದಗಿರಿ ಉಪ-ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುನಿಲ್ ಕುಮಾರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.