ಶಹಾಪುರ: ತಾಲ್ಲೂಕಿನ ಮರಕಲ್ ಗ್ರಾಮದ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಕಾಲೇಜು ಉಪನ್ಯಾಸಕನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ.
ದೇವದುರ್ಗ ತಾಲ್ಲೂಕಿನ ಗೋಪಾಳಪುರ ಗ್ರಾಮದ ನಿವಾಸಿ ಸಣ್ಣಮಾನಪ್ಪ ತಿಪ್ಪಣ್ಣ(59) ಕೊಲೆಯಾದ ವ್ಯಕ್ತಿ.
ಅವರು ದೇವದುರ್ಗದ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅವರಿಗೆ ಇಬ್ಬರು ಪತ್ನಿಯರು ಇದ್ದಾರೆ. ಮೊದಲನೆ ಪತ್ನಿ ಕಲಬುರಗಿಯಲ್ಲಿ ವಾಸವಾಗಿದ್ದಾರೆ. ಎರಡನೇಯ ಪತ್ನಿ ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ವಾಸವಾಗಿದ್ದಾರೆ. ದೇವದುರ್ಗದಿಂದ ಪತ್ನಿ ತವರೂರು ಹೈಯ್ಯಾಳ (ಬಿ) ಗ್ರಾಮಕ್ಕೆ ಬೈಕ್ ಮೇಲೆ ಬರುತ್ತಿರುವಾಗ ಕೊಲೆ ನಡೆದಿದೆ.
ಕೊಲೆಗೆ ಕೌಟಂಬಿಕ ಕಲಹ ಇರಬಹುದು. ಆರೋಪಿಗಳ ಪತ್ತೆಗಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.