ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಎಂಟಿಪಲ್ಲಿ ಗ್ರಾಮ ಹೊರವಲಯದ ಹತ್ತಿ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವ ಕುರಿತ ಖಚಿತ ಮಾಹಿತಿಯೊಡನೆ ದಾಳಿ ನಡೆಸಿದ ತಹಶೀಲ್ದಾರ್ ಸಂಗಮೇಶ ಜಿಡಗೆ ಹಾಗೂ ಸಿಪಿಐ ದೇವೀಂದ್ರಪ್ಪ ಧೂಳಖೇಡ್ ನೇತೃತ್ವದ ತಂಡ 7 ಕೆ.ಜಿ. ಗಾಂಜಾವನ್ನು ಮಂಗಳವಾರ ವಶಪಡಿಸಿಕೊಂಡಿದೆ.
ತಾಲ್ಲೂಕಿನ ಎಂ.ಟಿ.ಪಲ್ಲಿ ಗ್ರಾಮ ವ್ಯಾಪ್ತಿಯ ಸ.ನಂ.205 ರಲ್ಲಿ ಹತ್ತಿ ಬೆಳೆಯ ಮಧ್ಯದಲ್ಲಿ ಗಾಂಜಾ ಬೆಳೆಸುತ್ತಿರುವ ಕುರಿತು ಮಾಹಿತಿ ಸಿಗುತ್ತಿದ್ದಂತೆ ದಾಳಿ ನಡೆಸಿದ ತಂಡ, ಕನಕಪ್ಪ (70) ಎನ್ನುವವರ ಚಿಕ್ಕ ಹಾಗೂ ಬಲಿತ ಸಸಿಗಳು ಸೇರಿದಂತೆ ಒಟ್ಟು 18 ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ.
‘ಸಿಪಿಐ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಒಟ್ಟು 18 ಸಸಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾವು ವಶಪಡಿಸಿಕೊಂಡ ಸಸಿಗಳು 7 ಕೆ.ಜಿ. ತೂಕ ಹೊಂದಿವೆ. ಇಲಾಖೆಗೆ ಸಿಕ್ಕ ಮಾಹಿತಿಯಂತೆ ಕಂದಾಯ ಸಿಬ್ಬಂದಿಯನ್ನೂ ಒಳಗೊಂಡ ತಂಡವನ್ನು ರಚಿಸಿಕೊಂಡು ದಾಳಿ ಮಾಡಿದ್ದೇವೆ.ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು’ ಪಿಎಸ್ಐಹಣಮಂತ ತಿಳಿಸಿದರು.
ಕಂದಾಯ ನಿರೀಕ್ಷಕ ಶುಭಾಷ, ಅನ್ವರ್, ಗ್ರಾಮ ಲೆಕ್ಕಿಗರಾದ ವಿಜಯ, ದಸ್ತಗಿರಿ, ವೀರಭದ್ರಪ್ಪ, ಅಂಜಪ್ಪ ಹಾಗೂ ಪೊಲೀಸ್ ಸಿಬ್ಬಂದಿ ತಂಡದಲ್ಲಿತ್ತು.