ಯಾದಗಿರಿ:ಓದುಗರಿಗಾಗಿ ‘ಪ್ರಜಾವಾಣಿ’ ಏರ್ಪಡಿಸಿರುವ ರಸಪ್ರಶ್ನೆ ಸ್ಪರ್ಧೆಯ ಹಲವು ವಿಜೇತರು ಬಹುಮಾನ ಪಡೆದು ಖುಷಿಪಟ್ಟರು. ಓದುಗರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಈ ‘ಓದುಗರ ಕ್ವಿಜ್’ಗೆ ಪ್ರತಿ ದಿನವೂ ಉತ್ತರಗಳ ಮಹಾಪೂರವೇ ಹರಿದುಬಂತು.
ಒಂದು, ಎರಡು, ಮೂರನೇ ವಾರದ ನ್ಯೂಸ್ ಕ್ವಿಜ್ನಲ್ಲಿ ಜಿಲ್ಲೆಯ ಐವರು ಅದೃಷ್ಟಶಾಲಿ ಓದುಗರು ಬಹುಮಾನ ಪಡೆದುಕೊಂಡಿದ್ದಾರೆ. ನವೆಂಬರ್ 15ರಿಂದ ಡಿ.27ರ ತನಕ ನ್ಯೂಸ್ ಕ್ವಿಜ್ ನಡೆಯುತ್ತಿದೆ.
ಯಾದಗಿರಿ ನಗರದ ಪೂಜಾ ಜೈನ್, ಪ್ರಶಾಂತ ರೆಡ್ಡಿ ಎಲ್ಹೇರಿ, ಶಹಾಪುರದ ಬಸವೇಶ್ವರ ನಗರದ ಶ್ವೇತಾ, ತಾಲ್ಲೂಕಿನ ಭೀಮರಾಯನಗುಡಿಯ ಶಿವಾರೆಡ್ಡಿ, ಗಣೇಶ ನಗರದ ಅಮರೀಶ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
‘ಮೊದಲಿನಿಂದಲೂ ಪತ್ರಿಕೆ ಓದುತ್ತಿದ್ದೆವು. ಸ್ಪರ್ಧೆಗಾಗಿ ತುಸು ಗಂಭೀರವಾಗಿ ಓದಲು ಆರಂಭಿಸಿದೆವು. ಆವಾಗ ಎಷ್ಟೊಂದು ಆಳವಾದ, ತಿಳಿದಿರಲೇಬೇಕಾದ ವಿಷಯಗಳು ಗೊತ್ತಾದವು. ಈಗ ಇಡಿಯಾಗಿ ಪತ್ರಿಕೆ ಓದುವುದೇ ಅಭ್ಯಾಸವಾಗಿದೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದವರಿಗೆ ‘ಪ್ರಜಾವಾಣಿ’ಗಿಂತ ಬೇರೆ ಜ್ಞಾನದೀವಿಗೆ ಇಲ್ಲ’ ಎಂದು ವಿಜೇತರು ಅಭಿಮಾನ ವ್ಯಕ್ತಪಡಿಸಿದರು.