ಕವಡಿಮಟ್ಟಿ: ‘ಸನಾತನ ಪರಂಪರೆಯಲ್ಲಿ ದೇವಸ್ಥಾನಗಳಿಗೆ ಪೂಜ್ಯನೀಯ ಸ್ಥಾನವಿದೆ. ದೇಗುಲಗಳು ದೇವರು ಮತ್ತು ಧರ್ಮದ ಬಗ್ಗೆ ಶ್ರದ್ಧೆಯನ್ನು ಮೂಡಿಸುತ್ತವೆ. ನಮ್ಮನ್ನು ಜಾಗೃತಾವಸ್ಥೆಗೆ ತಂದು ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತವೆ’ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಕವಡಿಮಟ್ಟಿ ಹತ್ತಿರದ ಕ್ಯಾಂಪ್ನಲ್ಲಿ ನಿರ್ಮಿಸಿರುವ ರಾಮ ಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
‘ದೇವತಾ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಲಭಿಸುತ್ತದೆ. ದೈವಿಕ ಭಾವನೆಯಿಂದ ಮನಸ್ಸಿನ ಕಲ್ಮಶ ದೂರವಾಗುತ್ತದೆ. ಭಕ್ತರ ಸಹಕಾರದಲ್ಲಿ ದೇವಸ್ಥಾನ ಸ್ಥಾಪಿತಗೊಂಡಿರುವುದು ಸಂತಸ ತಂದಿದೆ. ದೇವಸ್ಥಾನದಲ್ಲಿ ನಿತ್ಯವು ಪೂಜೆ ಪಾಠಗಳಿಂದ ಭಕ್ತರ ಇಷ್ಟಾರ್ಥಗಳು ನೆರವೇರುವಂತಾಗಲಿ’ ಎಂದು ಶುಭ ಕೋರಿದರು.
ನಿಷ್ಠಿ ಕಡ್ಲೆಪ್ಪ ಮಠದ ಪ್ರಭುಲಿಂಗ ಸ್ವಾಮೀಜಿ, ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ರುಕ್ಮಾಪುರ ಹಿರೇಮಠದ ಶಾಂತಮೂರ್ತಿ ಶಿವಾಚಾರ್ಯ, ನಾಗಪ್ಪ ಮಹಾರಾಜರು, ಕುಂಬಾರಪೇಟೆಯ ಶರಣಯ್ಯಸ್ವಾಮಿ ಪುರಾಣಿಕಮಠ ಇತರೆ ಸ್ವಾಮೀಜಿಗಳು ಇದ್ದರು.
ನಂದಿ ಮತ್ತು ಈಶ್ವರ ಮೂರ್ತಿಗಳ ಜಲಾಧಿವಾಸ, ಧಾನ್ಯಾಧಿವಾಸ, ಕ್ಷೀರಾಧಿವಾಸ ನಂತರ ಶತ ಸಹಸ್ರ ಅಷ್ಠೋತ್ತರ, ಮಹಾರುದ್ರಾದಿ ಬೀಜ ಮಂತ್ರಾದಿಗಳ ಪಠಣ ನಡೆಯಿತು. ಭ್ರಮಾಧಿಮಂಡಲ ದೇವತಾ, ನವಗೃಹ, ಅಷ್ಟ ದಿಕ್ಪಾಲಕ ದೇವತಾ ಸ್ಥಾಪನೆ ನಡೆಯಿತು.
ಮುರಗಯ್ಯಸ್ವಾಮಿ ತಂಬೂರಿಮಠ ಮತ್ತು ಬಸಯ್ಯಸ್ವಾಮಿ ಹಿರೇಮಠ ಪೌರೋಹಿತ್ಯದಲ್ಲಿ ಪುಣ್ಯಾಃ ಸ್ಥಾನಿಪಾಕ ಭ್ರಮಾಧಿ ದೇವತಾ ಮಂಡಲ ಸ್ಥಾಪನೆ ‘ತ್ರøಯಂಬಕಂ ಮಜಾಮೆಯೇ ಸುಗಧಿಂ’ ‘ಪುಷ್ಠಿ ವರ್ಧನಿಂ ಊರ್ವಾ ರುಕ್ಮಿವಾ ಬಂಧನ ಮೃತೋರ್ಹ ಮುಮುಕ್ಷಿ ಮಹಾಮೃತಾತ’ ಎಂಬ ರುದ್ರದೇವರ ಮಂತ್ರದಿಂದ ಆಹುತಿ ನೀಡಲಾಯಿತು, ರುದ್ರ ಹೋಮ ಉಮಾಮಹೇಶ್ವರ, ಗಣ ಹೋಮ, ಪೂರ್ಣಾಹುತಿ ನಂತರ ಈಶ್ವರ ಮತ್ತು ನಂದಿ ದೇವರುಗಳ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.