ಕಕ್ಕೇರಾ: ಪಟ್ಟಣದಿಂದ ಬಲಶೆಟ್ಟಿಹಾಳಗೆ ಸಾಗುವ ದಾರಿಯಲ್ಲಿ ಬಾಕಿ ಉಳಿದ ಒಂದು ಕಿಮೀ ರಸ್ತೆಗೆ ಡಾಂಬರೀಕರಣ ಹಾಕುವಲ್ಲಿ ಲೋಕೋಪಯೋಗಿ ಇಲಾಖೆ ಹಿಂದೇಟು ಹಾಕಿದ್ದರಿಂದ ತಗ್ಗು,ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು, ಪ್ರಯಾಣಿಕರು ಸರ್ಕಸ್ ಮಾಡಿಕೊಂಡು ಸಂಚರಿಸುವಂತಾಗಿದೆ. 9 ಕಿ.ಮೀ ರಸ್ತೆಯಲ್ಲಿ 8 ಕಿ.ಮೀ ರಸ್ತೆಗೆ ಡಾಂಬರೀಕರಣ ಮಾಡಿ ದುರಸ್ತಿಗೊಳಿಸಲಾಗಿದ್ದು, ಚಿಂಚೋಡಿರ ದೊಡ್ಡಿಯಿಂದ ಒಂದು ಕಿಮೀ ರಸ್ತೆ ರಿಪೇರಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಅಲ್ಲಲ್ಲಿ ಜಲ್ಲಿಕಲ್ಲುಗಳು ಎದ್ದು ತೀರಾ ಹದಗೆಟ್ಟಿದ್ದು ಪ್ರಯಾಣಿಕರು ಆತಂಕದಲ್ಲಿ ಪ್ರಯಾಣಿಸುತ್ತದ್ದಾರೆ. ಅಪೆಂಡಿಕ್.ಇ. ಅಡಿಯಲ್ಲಿ 2.75 ಕೋಟಿ ರೂ.ವೆಚ್ಚದಲ್ಲಿ ಕಕ್ಕೇರಾದಿಂದ ಚಿಂಚೋಡಿರ ದೊಡ್ಡಿವರೆಗೂ ರಸ್ತೆಗೆ ಡಾಂಬರೀಕರಣ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಬಾಕಿ ಇದ್ದ ಒಂದು ಕಿ.ಮೀ ರಸ್ತೆಗೆ ಇಲ್ಲಿಯವರೆಗೂ ಡಾಂಬರೀಕರಣ ಮಾಡುವ ಗೋಜಿಗೆ ಇಲಾಖೆ ಮುಂದಾಗಿಲ್ಲ.
ಅಧಿಕಾರಿಗಳಿಗೆ ಕೇಳಿದರೆ ರಸ್ತೆಗೆ ಅನುದಾನ ಇಲ್ಲ ಎಂದು ಸಬೂಬು ಹೇಳುತ್ತಾರೆ ಎಂದು ಸಾರ್ವಜನಿಕರು ಅಸಮದಾನ ವ್ಯಕ್ತಪಡಿಸುತಿದ್ದಾರೆ.
ನಿರ್ವಹಣೆ ವೆಚ್ಚ ಎಲ್ಲಿ?: ಬಾಕಿ ಉಳಿದ ರಸ್ತೆಗೆ ಅನುದಾನ ಇಲ್ಲದೆ ಹಾಗೇ ಬಿಡಲಾಗಿದೆಯಾದರೂ ಇದಕ್ಕಾಗಿ ಇದ್ದ ನಿರ್ವಹಣೆ ವೆಚ್ಚದಲ್ಲಿ ಡಾಂಬರೀಕರಣ ಹಾಕಿ ದುರಸ್ತಿಗೊಳಿಸಬಹುದಾಗಿತ್ತು. ಇದಕ್ಕೂ ನಿಷ್ಕಾಳಜಿ ತೋರಲಾಗಿದೆ. ಹಾಗಾದರೆ ರಸ್ತೆಗೆ ಸಂಬಂಧಿಸಿದ ನಿರ್ವಹಣ ವೆಚ್ಚ ಏನು ಮಾಡಲಾಗಿದೆ ಎಂಬುದು ವಾಹನ ಸವಾರ ಸೋಮಶೇಖರ ಸೇವಟಿನ ಅವರ ಪ್ರಶ್ನೆಯಾಗಿದೆ.
ಮಳೆಗಾಲ ಆರಂಭವಾಗಿದ್ದ ರಸ್ತೆಯ ತುಂಬೆಲ್ಲ ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು 1 ಕಿ.ಮೀ ರಸ್ತೆಗೆ ತಾತ್ಕಾಲಿಕವಾಗಿ ರಿಪೇರಿ ಮಾಡಲಿ ಎಂದು ಪ್ರಯಾಣಿಕರು ಮತ್ತು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸದ್ಯ ಕ್ರಿಯಾಯೋಜನೆಡಿಯಲ್ಲಿ ಬಾಕಿ ಉಳಿದ ನೂರು ಮೀಟರ್ ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದಕ್ಕಾಗಿ ಅಂದಾಜು ವರದಿ ತಯಾರಿಸಲಾಗಿದ್ದು, ಅನುಮೊದನೆಯೊಂದಿಗೆ ಡಾಂಬರೀಕರಣ ರಸ್ತೆ ನಿರ್ಮಾಣಿಸಲಾಗುವುದು ಎಂದುಕಕ್ಕೇರಾದ ಎಇಇ ಸುಭಾಶ್ಚಂದ್ರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.