ಯಾದಗಿರಿ: ಪ್ರಸ್ತುತ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳು ಹೆಚ್ಚು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಎಲ್.ಹೊನೋಲೆ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮುಂಡರಗಿ ಸರ್ಕಾರಿ ಪ್ರೌಢ ಶಾಲೆ ಸಹಯೋಗದೊಂದಿಗೆ ವಿಶ್ವಮಾನವ ಹಕ್ಕುಗಳ ದಿನ ಅಂಗವಾಗಿ ತಾಲ್ಲೂಕಿನ ಮುಂಡರಗಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯಲ್ಲಿ ಮಾನವನ ಹಕ್ಕುಗಳ ಉದ್ಘೋಷಣೆ ಮತ್ತು 2023ರ ಧ್ಯೇಯ ವಾಕ್ಯ ‘ಸ್ವಾತಂತ್ರ್ಯ ಸಮಾನತೆ, ನ್ಯಾಯದ ಬಗ್ಗೆ ತಿಳಿ ಹೇಳಿದರು.
ವಕೀಲ ಬಿ.ಜಿ.ಪಾಟೀಲ ಮಾತನಾಡಿ, ಮಾನವ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ವಿವರವಾಗಿ ತಿಳಿಸಿದರು.
ವಕೀಲ ಭೀಮಾಶಂಕರ್ ಎಸ್.ಆಶನಾಳ ಮಾತನಾಡಿ, ಹಿಂದೆ ಅಭ್ಯಾಸ ಮಾಡಲು ಸರಿಯಾದ ಅವಕಾಶಗಳು ಇರಲಿಲ್ಲ. ಈಗ ಎಲ್ಲಾ ಅವಕಾಶಗಳು ಇರುವುದರಿಂದ ವಿದ್ಯಾರ್ಥಿಗಳು ಅವು ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕೆಂದು ಕಿವಿಮಾತು ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರ ಪ್ಯಾನೆಲ್ ವಕೀಲೆ ಕೃಷ್ಣವೇಣಿ ಜಿ.ನಿರ್ಮಲ್ಕರ್ ಮಾತನಾಡಿ, ಸಂವಿಧಾನದಲ್ಲಿ ನೀಡಲಾದ ಮೂಲಭೂತ ಹಕ್ಕುಗಳ ಬಗ್ಗೆ ಮಕ್ಕಳಿಗೆ ವಿವರಿಸಿ, ಎಲ್ಲರಿಗೂ ಸ್ವಾತಂತ್ರ್ಯ ಸಮಾನತೆ, ನ್ಯಾಯ ದೊರಕಬೇಕೆಂದು ಹೇಳಿದರು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸಾಯಪ್ಪ ಗಿಡ್ಡಿ ಮಾತನಾಡಿ, ಮೂಲಭೂತ ಹಕ್ಕುಗಳನ್ನು ಹೇಗೆ ಪಡೆಯುತ್ತೇವೋ ಹಾಗೆ ಕರ್ತವ್ಯಗಳನ್ನು ನಿರ್ವಹಿಸಲು ಎಲ್ಲರೂ ಸಿದ್ದರಾಗಿರಬೇಕು ಎಂದು ಹೇಳಿದರು.
ಶಾಲೆಯ ಶಿಕ್ಷಕ ಜಲಾಲುದ್ದೀನ್ ನಾಯ್ಕಲ್ ನಿರೂಪಿಸಿದರು.ಶಿಕ್ಷಕ ಸುರೇಶ ವಂದಿಸಿದರು.