ಕೆಂಭಾವಿ: ಹೈಟೆನ್ಸೆನ್ ವಿದ್ಯುತ್ ತಂತಿ ಹರಿದುಬಿದ್ದು ಒಂಭತ್ತು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು, 70 ಮಾವಿನ ಮರ, 150 ಟೆಂಗಿನ ಮರ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಯಾಳಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಪಟ್ಟಣ ನಿವಾಸಿ ದೊಡ್ಡನಗೌಡ ಮಾಲಿಪಾಟೀಲ ಎಂಬುವರಿಗೆ ಸೇರಿದ ಸರ್ವೆ ನಂ370 ಮತ್ತು 364 ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಇದೇ ಕಬ್ಬು ತೋಟಕ್ಕೆ ಹೊಂದಿಕೊಂಡಂತೆ ತೆಂಗು ಮತ್ತು ಮಾವಿನ ಮರ ಬೆಳೆಸಲಾಗಿತ್ತು. ಫಸಲು ಕೈಗೆ ಬರುವಷ್ಟರಲ್ಲಿ ಈ ಅವಘಢ ಸಂಭವಿಸಿದೆ.
ಸಕ್ಕರೆ ಕಾರ್ಖಾನೆ ಹಾಗೂ ಜೆಸ್ಕಾಂ ವಿರುದ್ಧ ಆಕ್ರೋಶ: ಈ ಕಬ್ಬು ಕಳೆದ ನವಂಬರ್ ತಿಂಗಳಲ್ಲೆ ಕಟಾವಿಗೆ ಬಂದಿದ್ದು ಈ ಕುರಿತು ಕಲಬುರಗಿ ಜಿಲ್ಲೆಯ ನಾಗರಹಳ್ಳಿಯ ಹೂಗಾರ ಶುಗರ್ ಕಾರ್ಖಾನೆಗೆ ಕಬ್ಬು ಕೊಡುವ ಒಪ್ಪಂದವಾಗಿತ್ತು. ಕಟಾವಿನ ಅವಧಿ ಮುಗಿದು ಮೂರು ತಿಂಗಳು ಗತಿಸಿದರೂ ಕಾರ್ಖಾನೆ ಕಬ್ಬನ್ನು ಕಟಾವು ಮಾಡದೆ ನಿರ್ಲಕ್ಷ ತೋರಿದ್ದರಿಂದ ಈ ಅವಘಢ ಸಂಭವಿಸಿ ಸಂಪೂರ್ಣ ಕಬ್ಬು ಬೆಂಕಿಗೆ ನಾಶವಾಯಿತು.
ಜಮೀನಿನ ಮಧ್ಯಭಾಗದಿಂದ ಹಾದು ಹೋಗಿರುವ ಹೈಟೆನ್ಸೆನ್ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಕಬ್ಬು ಸಂಪೂರ್ಣ ಭಸ್ಮವಾಯಿತು ಎಂದು ರೈತ ದೊಡ್ಡನಗೌಡ ಮಾಲಿಪಾಟೀಲ ತಮ್ಮ ಆಕ್ರೋಶ ಹೊರಹಕಿದರು.
ಸ್ಥಳಕ್ಕೆ ಬಂದ 2 ಅಗ್ನಿಶಾಮಕ ವಾಹನ ಬೆಂಕಿ ನಂದಿಸಲು ಯಶಸ್ವಿಯಾದರೂ ಕಬ್ಬು ಮಾತ್ರ ಸಂಪೂರ್ಣ ಭಸ್ಮವಾಯಿತು. ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.