ಸುರಪುರ: ‘ಸರ್ಕಾರ ಮಕ್ಕಳಿಗಾಗಿ ಬೇಸಿಗೆ ಶಿಬಿರ ಯೋಜನೆ ಮಾಡಿದ್ದು ಇದರ ಮೂಲಕ ಮಕ್ಕಳಿಗೆ ವಿವಿಧ ಕಲೆಗಳನ್ನು ತಿಳಿಸಲಾಗುತ್ತಿದೆ’ ಎಂದು ನೃತ್ಯ ಪಟು ಅನಿಲ್ ಜಿ.ಕೆ. ಹೇಳಿದರು.
ರಂಗಂಪೇಟೆಯ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.
‘ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಹಾಗೂ ಖಾಸ್ಗತೇಶ್ವರ ನೃತ್ಯ ಕಲಾ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಒಂದು ವಾರರ ಮಕ್ಕಳಿಗೆ ಉಚಿತವಾಗಿ ನೃತ್ಯ, ಯೋಗ, ಕರಾಟೆ, ಜನಪದ ನೃತ್ಯ, ಭರತ ನಾಟ್ಯವನ್ನು ಕಲಿಸಿಕೊಡಲಾಗುತ್ತಿದೆ’ ಎಂದರು.
ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ವರೆಗೆ ತರಬೇತಿ ನೀಡಲಾಗುತ್ತಿದೆ. ನುರಿತ ತರಬೇತುದಾರರು ತರಬೇತಿಯನ್ನು ನೀಡಲಿದ್ದಾರೆ. ಮಕ್ಕಳಲ್ಲಿ ಕೌಶಲವನ್ನು, ಕಲಾಸಕ್ತಿಯನ್ನು ಮೂಡಿಸಲಾಗುತ್ತದೆ. ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕರಾಟೆ ತರಬೇತುದಾರರಾದ ಭಾಗೇಶ ಕುಂಬಾರ, ಗಂಗಾಧರ ಹಾಗೂ ಮಕ್ಕಳು ಭಾಗವಹಿಸಿದ್ದರು.