ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆ ತಾಂಡಾದಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟು, 7 ಜನ ಗಾಯಗೊಂಡಿದ್ದಾರೆ.
ಮುದ್ನಾಳ ದೊಡ್ಡಾತಾಂಡಾದ ಪವನ್ ವಾಲು ರಾಠೋಡ (15) ಮೃತಪಟ್ಟ ಬಾಲಕ. ಹೊಸಕೇರಾ ಮೇಲಿನ ತಾಂಡಾದ ರಾಮು ರಾಠೋಡ ಮನೆ ಹತ್ತಿರ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಾಂಡಾದ ಬಸುನಾಯಕ್ ಚವಾಣ್ ಎನ್ನುವವರ ಗೃಹಪ್ರವೇಶ ಇತ್ತು. ಮುದ್ನಾಳ ದೊಡ್ಡಾತಾಂಡಾದ 9ನೇ ತರಗತಿ ವಿದ್ಯಾರ್ಥಿಪವನ್ ಸೇರಿದಂತೆ ನೆಂಟರು ಬಂದಿದ್ದರು. ಜೋರು ಮಳೆಯಾಗಿ ಟಿನ್ಶೆಡ್ ಮೇಲೆ ಸಿಡಿಲು ಬಿದ್ದು ನಂತರ ಬಾಲಕನ ಮೇಲೆ ಬಿದ್ದಿದೆ. ಅಲ್ಲಿದ್ದವರಿಗೆ ಸಿಡಿಲಿನ ಚೂರುಗಳು ಸಿಡಿದು ಗಾಯಗಳಾಗಿವೆ ಎಂದು ತಾಂಡಾದ ಚಂದ್ರಶೇಖರ ಜಾಧವ ತಿಳಿಸಿದ್ದಾರೆ.
ಓಂಕಾರ ಮಹಾದೇವ ಸಿಂಧೆ, ರುದ್ರ ಮಹಾದೇವ ಸಿಂಧೆ, ತಿಪ್ಪಿಬಾಯಿ ಮಹಾದೇವ ಸಿಂಧೆ, ಸೊಬಮ್ಮ ಮಹಾದೇವ ಸಿಂಧೆ, ದೇವಿಬಾಯಿ ಸಂತೋಷ, ಭೀಮಸಿಂಗ ರೇವು ರಾಠೋಡ, ಲಕ್ಷ್ಮಿಬಾಯಿ ಭೀಮು ರಾಠೋಡ ಅವರು ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.