ಸೈದಾಪುರ: ಚರಂಡಿ ಅವ್ಯವಸ್ಥೆಯಿಂದ ಮನೆಯಂಗಳದಲ್ಲಿ ಕೊಳಚೆ ನೀರು, ಮುಳ್ಳು ಗಿಡಗಳಿಂದ ಮುಚ್ಚಿಕೊಂಡ ರಸ್ತೆ ಸೇರಿದಂತೆ ಹಲವು ಸಮಸ್ಯೆಗಳು ವಾರ್ಡ್ ಸಂಖ್ಯೆ-3ರ ಲಕ್ಷ್ಮೀ ನಗರದಲ್ಲಿವೆ.
ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿದ ಮುಳ್ಳು ಕಂಟಿಗಳು, ಅಂಬಿಗರ ಚೌಡಯ್ಯ ವೃತ್ತದಿಂದ ಲಕ್ಷ್ಮೀ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮುಳ್ಳು ಗಿಡಗಳು ಸಂಪೂರ್ಣವಾಗಿ ರಸ್ತೆಯನ್ನು ಆವರಿಸಿಕೊಂಡು ಬಿಟ್ಟಿವೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಯಿಂದ ಚರ್ಚ್ ಹತ್ತಿರ, ಸಿನಿಮಾ ಮಂದಿರದ ಹತ್ತಿರ ಇರುವ ಮನೆಗಳ ಮುಂಭಾಗದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತದೆ.
ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದ್ದು, ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸದಸ್ಯರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜನರು.
ನಿರುಪಯುಕ್ತವಾದ ಟ್ಯಾಂಕ್ಗಳು: 15ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಿಸಿದ ನೀರಿನ ಟ್ಯಾಂಕ್ಗಳು ನಿರುಪಯುಕ್ತವಾಗಿವೆ. ವಾರ್ಡನಲ್ಲಿ ಕೇವಲ ಒಂದು ಕೈಪಂಪ್ ಇದೆ. ಎರಡು ಟ್ಯಾಂಕ್ಗಳನ್ನು ಆರು ತಿಂಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿಯವರೆಗೂ ಅವುಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ.
ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಸಿ.ಸಿ ರಸ್ತೆ, ಚರಂಡಿಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಸಿ.ಸಿ ರಸ್ತೆಗಳು ಅಲ್ಲಲ್ಲಿ ಬಿರುಕು ಬಿಟ್ಟು ಸಿಮೆಂಟ್ ಮತ್ತು ಜಲ್ಲಿಕಲ್ಲುಗಳು ಕಿತ್ತಿವೆ. ಇದರಿಂದ ವಾಹನಗಳ ಜನಸಂಚಾರಕ್ಕೆ ತೊಂದರೆಯಾಗಿದೆ.
’ಹತ್ತು ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿದ್ದರೂ ಸಂಬಂಧಪಟ್ಟ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದೇ ಕಣ್ಣು ಮುಚ್ಚಿಕುಳಿತಿದ್ದಾರೆ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ‘ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
’ನನ್ನ ಅವಧಿಯಲ್ಲಿ ಸಿ.ಸಿ ರಸ್ತೆ, ಚರಂಡಿಗಳ ದುರಸ್ತಿ ಕಾರ್ಯ ಹಾಗೂ ಜಂಗಲ್ ಕಂಟಿಂಗ್ ಮಾಡಲಾಗಿತ್ತು. ಈಗ ಅವು ನೆನೆಗುದಿಗೆ ಬಿದ್ದಿವೆ. ಈಗಿನ ಸದಸ್ಯರು ಜನರನ್ನು ಸಮಸ್ಯೆಗಳ ಕೂಪಕ್ಕೆ ತಳ್ಳಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರೇಮಸಿಂಗ್ ರಾಠೋಡ ಕಿಡಿಕಾರಿದರು.
’15ನೇ ಹಣಕಾಸು ಯೋಜನೆಯಲ್ಲಿ ಚರಂಡಿಯ ಹೂಳೆತ್ತಲು, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಆದರೆ ಕೆಲಸ ಮಾತ್ರ ಶೂನ್ಯ’ ಎನ್ನುತ್ತಾರೆ ನಿವಾಸಿ ಅನಿಲ ಕುಮಾರ ಬೆಳಗುಂದಿ.
Quote - ಶೀಘ್ರವೇ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತೇನೆ. ಈ ಕುರಿತು ಸಾಮಾನ್ಯಸಭೆಯಲ್ಲಿ ಚರ್ಚೆ ನಡೆಸುತ್ತೇನೆ ಕವಿತಾ ಮಿರಿಯಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ
Quote - ಸಾಮಾನ್ಯ ಸಭೆಯಲ್ಲಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸದಸ್ಯರು ಹೇಳಿದ್ದಾರೆ. ಮುಂದಿನ ಯೋಜನೆ ವರದಿಯಲ್ಲಿ ಸೇರಿಸಿ ಅಧ್ಯಕ್ಷರ ಜೊತೆ ಚರ್ಚಿಸಿ ಪರಿಹರಿಸಲು ಪ್ರಯತ್ನಿಸುತ್ತೇನೆ. ಗಿರಿಮಲ್ಲಣ್ಣ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೈದಾಪುರ
Quote - ಪ್ರಸ್ತುತ ಇರುವ 3ನೇ ವಾರ್ಡ್ನ ಗ್ರಾ.ಪಂ ಸದಸ್ಯರು ಜನರನ್ನು ಸಮಸ್ಯೆಗಳ ಕೂಪಕ್ಕೆ ತಳ್ಳಿದ್ದಾರೆ. ಸಮಸ್ಯೆ ಬಗೆಹರಿಸದೇ ಇದ್ದರೆ ಹೋರಾಟ ಮಾಡುತ್ತೇವೆ ಪ್ರೇಮಸಿಂಗ್ ರಾಠೋಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.