ಯಾದಗಿರಿ: ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣ ಕಾಯ್ದೆ ಸಂಸತ್ತಿನಲ್ಲಿ ಜಾರಿಗೆ ತರುತ್ತಿದ್ದು, ಇದನ್ನು ವಿರೋಧಿಸಿ ಆಗಸ್ಟ್ 10ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಜೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಹೇಳಿದರು.
ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರ ಸಂಘ ಅಧಿಕಾರಿಗಳ ಅಸೋಸಿಯೇಷ್ನ ಒಕ್ಕೂಟ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಂಸ್ಥೆ ಹಾಗೂ ಗುತ್ತಿಗೆದಾರರ ಸಂಘದಿಂದ ನಡೆದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.
ಕಳೆದ 50 ವರ್ಷಗಳಿಂದ ರೈತರ, ಗ್ರಾಹಕರ, ಸಾರ್ವಜನಿಕರ ಜನರ ಸೇವೆ ಮಾಡುತ್ತಿದ್ದು, ಈಗ ಏಕಾಏಕಿ ಕೇಂದ್ರ ಸರ್ಕಾರ ವಿದ್ಯುತ ಪ್ರಸರಣ ಇಲಾಖೆ ಖಾಸಗೀಕರಣಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದರು.
ಪ್ರತಿಭಟನೆಗೆ ಎಲ್ಲ ನೌಕರರು ಒಂದು ದಿನ ರಜೆ ಹಾಕುವ ಮೂಲಕ ಕೇಂದ್ರದ ಕಾಯ್ದೆ ವಿರುದ್ಧ ಹೋರಾಟ ನಡೆಸಲಿದ್ದಾರೆ. ಎಲ್ಲ ನೌಕರರು, ಗುತ್ತಿಗೆದಾರರು ಒಗ್ಗೂಟ್ಟಿನಿಂದ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕೆಪಿಟಿಸಿಎಲ್ ಲೆಕ್ಕಾಧಿಕಾರಿ ಹಣಮಂತರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣೆ ಪೂರ್ವ ನೀಡಿದ ಪ್ರಣಾಳಿಕೆಯಲ್ಲಿ 2021ರ ವಿದ್ಯುತ್ ಕಾಯ್ದೆ ತಿದ್ದುಪಡೆ ಅಜೆಂಡಾ ಇರಲಿಲ್ಲ. ಏಕಾಏಕಿ ಕಾಯ್ಕೆ ಜಾರಿ ಮಾಡುತ್ತಿರುವುದು ಖಾಸಗಿ ಅವರಿಗೆ ಮಣೆ ಹಾಕುತ್ತಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುಚಿತಕುಮಾರ, ಶಂಕರ ಗುತ್ತಿ, ಶಾಂತಪ್ಪ ಪೂಜಾರಿ, ಚಂದಪ್ಪ, ಸಂಜೀವಕುಮಾರ್, ಚಂದ್ರಕಾಂತ ಇದ್ದರು.