ಯರಗೋಳ (ಯಾದಗಿರಿ): ಗ್ರಾಮದ ವಾರ್ಡ್ ಸಂಖ್ಯೆ 4 ರಲ್ಲಿ ಶನಿವಾರ ರಾತ್ರಿ 8ಕ್ಕೆ ಫಾತೀಮಾ ಅಲ್ಲೂರು ಅವರಿಗೆ ಸೇರಿದ ಮನೆಯ ಮೇಲ್ಛಾವಣೆ ಕುಸಿದು, ವಿಸ್ಮಯ ರೀತಿಯಲ್ಲಿ ಮನೆಯಲ್ಲಿದ್ದವರು ಸಾವಿನ ದವಡೆಯಿಂದ ಪಾರಾಗಿದ್ದಾರೆ.ಈಚೆಗೆ ಗ್ರಾಮದಲ್ಲಿ ಜಿಟಿಜಿಟಿ ಮಳೆಯಾಗಿತ್ತು.
ಮನೆಯ ಒಡತಿ ಕೆಲಸವನ್ನು ಅರಸಿ ಮಕ್ಕಳೊಂದಿಗೆ ಹೈದರಾಬಾದ್ ಮಹಾನಗರಕ್ಕೆ ತೆರಳಿದ್ದರು. ಅದೇ ವಾರ್ಡ್ ನಿವಾಸಿ ಮಕೂಮಾ ಅವರು 15 ದಿನಗಳ ಹಿಂದೆ ಮನೆಯನ್ನು ಬಾಡಿಗೆ ಪಡೆದಿದ್ದರು. 4 ಮಕ್ಕಳೊಂದಿಗೆ ಮನೆಯ ಇನ್ನೊಂದು ಕೋಣೆಯಲ್ಲಿ ಊಟ ಮಾಡುತ್ತಿದ್ದರು. ಹೊರಗಡೆ ಕೋಣೆಯ ಮೇಲ್ಛಾವಣಿ ಜೋರಾದ ಸದ್ದಿನೊಂದಿಗೆ ಕುಸಿದಿದೆ. ಕೂಡಲೇ ಮನೆ ಸುತ್ತಲಿನ ಜನರು ಮನೆಯ ಒಳಕೋಣೆಯಲ್ಲಿದ್ದ ಮಹಿಳೆ, 4 ಮಕ್ಕಳನ್ನು ಹೊರ ತರಲು ಯಶಸ್ವಿಯಾದರು. ಪ್ರತಿದಿನಮೇಲ್ಛಾವಣೆ ಬಿದ್ದ ಕೋಣೆಯಲ್ಲಿ ಮಕ್ಕಳು ತಾಯಿ ಜೊತೆಯಲ್ಲಿ ಟಿವಿ ನೋಡುತ್ತ ಮಲಗುತ್ತಿದ್ದರು. ಸುತ್ತಲಿನ ಜನರು ಆಶ್ಚರ್ಯ ವ್ಯಕ್ತಪಡಿಸುತ್ತ 'ಪ್ರಜಾವಾಣಿ'ಗೆ ತಿಳಿಸಿದರು.
ದೇವರ ದಯೆಯಿಂದ ಯಾವುದೇ ಸಾವು ನೋವು ಆಗಿಲ್ಲ ಎಂದು ಸುತ್ತಲಿನ ಜನರು ನೆಮ್ಮದಿಯ ಉಸಿರು ಬಿಟ್ಟರು. ಶಂಕರ ಮಡಿವಾಳ, ಹಣಮಂತ ತಳವಾರ, ಸಾಬಣ್ಣ ಬಾನರ, ಇಬ್ರಾಹಿಂ, ಸಿದ್ದಪ್ಪ ಬಂದಳ್ಳಿ ಘಟನೆ ನಡೆದ ಸ್ಥಳದಲ್ಲಿ ಇದ್ದರು.