ಯಾದಗಿರಿ: ನಗರದ ಶ್ರೀರಕ್ಷಾ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯ ಸಮಿತಿ ಸದಸ್ಯ ಅನಿಲ್ ದೇಶಪಾಂಡೆ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಪತ್ರಕರ್ತರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಕೊರೊನಾ ಬಗ್ಗೆ ಅನೇಕ ಪತ್ರಕರ್ತರು ಜೀವದ ಹಂಗು ತೊರೆದು ಸುದ್ದಿ ಮಾಡುತ್ತಿದ್ದಾರೆ. ಕೆಲವರು ಜೀವವನ್ನು ಕಳೆದುಕೊಂಡಿದ್ದಾರೆ. ಅದಕ್ಕಾಗಿ ಅವರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಇತರಿರಗೆ ನೀಡುವ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಂ. ಜಗದೀಶ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ ಮಾತನಾಡಿದರು.
ಶ್ರೀರಕ್ಷಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಕೃಷ್ಣಮೂರ್ತಿ ಕುಲಕರ್ಣಿ, ಪತ್ರಕರ್ತರಾದ ಎಸ್.ಎಸ್.ಮಠ, ಸಿದ್ದಪ್ಪ ಲಿಂಗೇರಿ, ರಾಜು ನಳ್ಳಿಕರ, ಸಾಗರ ದೇಸಾಯಿ, ಸೈಯದ್ ಸಾಜೀದ್ ಹಯ್ಯಾತ್, ರವೀಂದ್ರ ಕುಲಕರ್ಣಿ, ನಾಗಪ್ಪ ನಾಯ್ಕಲ್ ಇದ್ದರು.
ಇದೇ ವೇಳೆ ಪತ್ರಕರ್ತರಾದ ಗೋಪಾಲರಾವ್ ಕುಲಕರ್ಣಿ ಮತ್ತು ದಿನೇಶ ಶುಕ್ಲಾ ಅವರು ನಿಧನದ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡಲಾಯಿತು.