ಶಹಾಪುರ: ತೀರ್ಥಕ್ಷೇತ್ರಕ್ಕೆ ತೆರಳಿ ತಮ್ಮೂರಿಗೆ ವಾಪಸ್ಸಾಗುತ್ತಿದ್ದ ಮಹಿಳೆಯನ್ನು ಅಪಹರಿಸಿದ ಇಬ್ಬರು ಆಟೊ ಚಾಲಕರು, ನಿರ್ಜನ ಪ್ರದೇಶಕ್ಕೆ ಕರೆದೊಯ್ದುಅತ್ಯಾಚಾರ ಎಸೆಗಿರುವ ಘಟನೆ ಶಹಾಪುರ ತಾಲ್ಲೂಕಿನಲ್ಲಿ ನಡೆದಿದೆ.
‘ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮಹಿಳೆ ಸೋಮವಾರ ಶಹಾಪುರ ಠಾಣೆಗೆ ದೂರು ನೀಡಿದ್ದಾರೆ. ರಾಜು (21), ವೀರೇಶ್ (25) ಎಂಬುವವರನ್ನು ಬಂಧಿಸಲಾಗಿದ್ದು, ತನಿಖೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಘಟನೆ ವಿವರ: ‘ಭೀಮನ ಅಮಾವಾಸ್ಯೆಯಂದು ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ತೆರಳಿ ಸಂಬಂಧಿಯ ಬೈಕ್ನಲ್ಲಿ ಊರಿಗೆ ವಾಪಸ್ಸಾಗುತ್ತಿದ್ದೆವು.ಮಾರ್ಗಮಧ್ಯೆ ದೇವದುರ್ಗ ಕ್ರಾಸ್ ಬಳಿ ರಾತ್ರಿ ಚಹಾ ಸೇವಿಸಿ ಒಂದು ಕಿ.ಮೀ ಪ್ರಯಾಣಿಸಿದ್ದೆವು. ನಮ್ಮನ್ನು ಹಿಂಬಾಲಿಸಿದ ಆಟೊ ಚಾಲಕರು ಬೈಕ್ ಅಡ್ಡಗಟ್ಟಿ ಬೀಗ ಕಿತ್ತಿಕೊಂಡು ಸವಾರನನ್ನು ಥಳಿಸಿ, ನನ್ನನ್ನು ಆಟೊದಲ್ಲಿ ಕರೆದೊಯ್ದು ಆತ್ಯಾಚಾರ ಮಾಡಿದ್ದಾರೆ’ ಎಂದು ಮಹಿಳೆ ದೂರು ನೀಡಿದ್ದಾಗಿ ಹೇಳಿದ್ದಾರೆ.