ಗುರುಮಠಕಲ್: ಅಪರಿಚಿತರು ನಿಮ್ಮನ್ನು ಕರೆದಾಗ ಅವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸುವಂತೆ ವಿದ್ಯಾರ್ಥಿಗಳಿಗೆ ಗುರುಮಠಕಲ್ ಸಿಪಿಐ ಹೊಸಕೇರಪ್ಪ ಸಲಹೆ ನೀಡಿದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಜರುಗುತ್ತಿರುವ ಅಪರಾಧಗಳಿಗೆ ಜಾಗೃತಿಯ ಕೊರತೆ ಕಾಣುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳು ಜರುಗುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ 100 ಸಂಖ್ಯೆಗೆ ಕರೆ ಮಾಡುವ ಮೂಲಕ ಅಪರಾಧಗಳನ್ನು ತಡೆಯುವಂತೆ ಅವರು ಹೇಳಿದರು.
ಪಿಎಸ್ಐ ಶೀಲಾ ದೇವಿ ಮಾತನಾಡಿ, ಮೊಬೈಲಿಗೆ ಅಪರಿಚಿತ ಕರೆಗಳ ಮೂಲಕ ನಿಮಗೆ ಬಹುಮಾನ, ಹಣ ಬಂದಿದೆ ಎಂದು ನಂಬಿಸಿ ನಿಮ್ಮ ಎಟಿಎಂ ಸಂಖ್ಯೆ, ಆಧಾರ್ ಸಂಖ್ಯೆ, ಒಟಿಪಿ ನೀಡುವಂತೆ ಕೇಳಿದಾಗ ಸೈಬರ್ ಪ್ರಕರಣ ದಾಖಲಿಸಿ ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ 18 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ವಿವಾಹ ಜರುಗುತ್ತಿದ್ದರೆ ಕೂಡಲೇ ಹತ್ತಿರದ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹದಂತಸಾಮಾಜಿಕ ಅನಿಷ್ಠವನ್ನುತಡೆಯುವ ಕೆಲಸ ನೀವು ಮಾಡಬೇಕಿದೆ ಎಂದು ಹೇಳಿದರು.
ಉಪಪ್ರಾಂಶುಪಾಲ ಬಸವರಾಜ ನಂದೆಪಲ್ಲಿ ಅಧ್ಯಕ್ಷತೆವಹಿಸಿದ್ದರು, ಶಾಲಾ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕರಾದ ಶ್ರೀನಿವಾಸ ಸ್ವಾಗತಿಸಿದರು, ಮೋತಿಲಾಲ್ ವಂದಿಸಿದರು.