ಯಾದಗಿರಿ: ನೂತನ ಸಿಇಟಿ ಕಾಯಿದೆ ಜಾರಿಗೊಳಿಸುವ ಸರ್ಕಾರದ ಕ್ರಮವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಬುಧವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಅರವಿಂದ ಉಪ್ಪಿನ್ ಮಾತನಾಡಿ, ಸರ್ಕಾರದ ಹೊಸ ಸಿಇಟಿ ನೀತಿಯಿಂದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಬಡವರು ವೃತ್ತಿಪರ ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 10 ಸರ್ಕಾರಿ ಹಾಗೂ 32 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. 9 ಸ್ವಾಯತ್ತ ವಿಶ್ವವಿದ್ಯಾಲಯಗಳಿವೆ. ಖಾಸಗಿ ಕಾಲೇಜುಗಳಲ್ಲಿನ ಶೇ 50ರಷ್ಟು ಸೀಟುಗಳು ಸೇರಿ ಕಳೆದ ವರ್ಷ ಸಿಇಟಿ ಮೂಲಕ ಹಂಚಿಕೆಗೆ 2,591 ಸೀಟುಗಳು ಲಭ್ಯವಾಗಿದ್ದವು.
ಹೊಸ ಕಾಯಿದೆ ಜಾರಿಯಿಂದ ಸೀಟುಗಳ ಸಂಖ್ಯೆ 1,150ಕ್ಕೆ ಸೀಮಿತವಾಗಲಿದೆ. ಸ್ವಾಯತ್ತ ವಿಶ್ವವಿದ್ಯಾಲಯಗಳ ವಿಚಾರ ಏನಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 198 ಎಂಜಿನಿಯರಿಂಗ್ ಕಾಲೇಜುಗಳಿವೆ. ಕಳೆದ ವರ್ಷ 49,580 ಸೀಟುಗಳು ಲಭ್ಯವಿದ್ದವು, 12 ಸರ್ಕಾರಿ ಮತ್ತು 9 ಅನುದಾನಿತ ಕಾಲೇಜುಗಳಲ್ಲಿ ಈ ಬಾರಿ ಕೇವಲ 6,150 ಸೀಟುಗಳಿಗೆ ಮಾತ್ರ ಲಭ್ಯವಾಗಲಿವೆ. 2 ಸರ್ಕಾರಿ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ 20 ಸೀಟುಗಳು ಪ್ರವೇಶಕ್ಕೆ ಸಿಗಲಿವೆ ಎಂದು ವಿವರಿಸಿದರು.
ಕಾಮೆಡ್–ಕೆ, ಪೋಷಕರಿಂದ ಹಣ ಬಾಚಿಕೊಳ್ಳುವ ಒಕ್ಕೂಟವಾಗಿದೆ, ಇಲ್ಲಿ ಯಾವುದೇ ಕಾನೂನು, ನೀತಿ ನಿಯಮಗಳು ಪಾರದರ್ಶಕವಾಗಿಲ್ಲ, ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡುವ ಒಕ್ಕೂಟವಾಗಿದೆ. ಕಾಮೆಡ್–ಕೆ ಮೇಲೆ ಶುಲ್ಕ ಮೇಲುಸ್ತುವಾರಿ ಸಮಿತಿ ನೀಡಿದ ದೂರುಗಳನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು, ಶೇ 50ರಷ್ಟು ಸೀಟುಗಳಿಗೆ ಈಗಿರುವಂತೆ ಸರ್ಕಾರದ ಶುಲ್ಕವನ್ನು ಮುಂದುವರಿಸಬೇಕು, ಉಳಿದ ಶೇ 50 ಸೀಟುಗಳಿಗೆ ಆಡಳಿತ ಮಂಡಳಿಗಳೊಂದಿಗೆ ಕುಳಿತು ಶುಲ್ಕ ನಿರ್ಧರಿಸಬೇಕು, 2006ರ ಕಾಯ್ದೆಯನ್ನು ಜಾರಿಗೊಳಿಸಬಾರದು, ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ ವೃತ್ತಿಶಿಕ್ಷಣದ ತೀರ್ಪನ್ನು ಜಾರಿಗೊಳಿಸಬಾರದು. ಅದು ವಿದ್ಯಾರ್ಥಿಗಳ ವಿರುದ್ಧವಾಗಿದೆ ಎಂದು ಮನವಿ ಮಾಡಿದರು.
ನಗರ ಘಟಕದ ಕಾರ್ಯದರ್ಶಿ ರಾಕೇಶ ಕ್ಷೀರಸಾಗರ, ವೀರಭದ್ರಪ್ಪ ಕಿರದಳ್ಳಿ, ದೇವಿಂದ್ರ, ಉಸ್ಮಾನ್, ವೆಂಕಟೇಶ, ವಿಶ್ವಾರಾಧ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.