ಶಹಾಪುರ: ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಮಾಜಿ ಶಾಸಕ ದಿ.ಶಿವಶೇಖರಪ್ಪಗೌಡ ಪಾಟೀಲರು ಬದುಕಿನುದ್ದಕ್ಕೂ ಕಾರ್ಯಕರ್ತರನ್ನು ಮರೆಯಲಿಲ್ಲ. ಅಧಿಕಾರವಿರಲಿ ಅಥವಾ ಬಿಡಲಿ ನಂಬಿದ ಜನತೆಯ ಕೈಯನ್ನು ಯಾವತ್ತೂ ಬಿಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಸಾರಿದ ರಾಜಕಾರಣಿ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಹೇಳಿದರು.
ತಾಲ್ಲೂಕಿನ ಸಿರವಾಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ದಿ.ಶಿವಶೇಖರಪ್ಪಗೌಡ ಪಾಟೀಲ್ರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಿ.ಶಿವಶೇಖರಪ್ಪಗೌಡ ಪಾಟೀಲರು ಮುಗ್ದ ರಾಜಕಾರಣಿ. ಚಾಲಕಿತನವು ಅವರಲ್ಲಿ ಇರಲಿಲ್ಲ ಇದುವೇ ಅವರ ಬಹುದೊಡ್ಡ ಕೊರತೆಯಾಗಿತ್ತು. ಒಂದೇ ಕುಟುಂಬದ ಹತ್ತಿರ ಅಧಿಕಾರ ಹೆಪ್ಪುಗಟ್ಟಬಾರದು. ಏಕಚಕ್ರಾಧಿಪತ್ಯ ಬರುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ. ರಾಜಕಾರಣಿಗಳಿಗೆ ಬದ್ದತೆ ಕಡಿಮೆಯಾಗುತ್ತಿದೆ. ನಿಷ್ಠೆಯನ್ನು ನಾವು ಎಂದೂ ಬದಲಾಯಿಸಬಾರದು ಎಂದು ಹಿರಿಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಕಿವಿ ಮಾತು ಹೇಳಿದರು.
ಮಠಾಧೀಶರ ತವರು ಮನೆ ಸಿರವಾಳ ಆಗಿದೆ. ರಾಜಕೀಯ ಜಂಜಾಟದಲ್ಲಿಯೂ ಸಹ ಧಾರ್ಮಿಕ ಮುಖಂಡರ ಜೊತೆ ಅವರು ಉತ್ತಮ ಬಾಂಧವ್ಯ ಬೆಳೆಸಿಕೊಂಡು ಬಂದಿದ್ದರು. ಯಾರಿಗೂ ಕೇಡನ್ನು ಬಯಸದ ಪರರ ಬಗ್ಗೆ ಹಿತಚಿಂತಕರಾಗಿದ್ದ ಶುಭ್ರ ಬಿಳಿ ಗರಿ ಗರಿ ಉಡಿಗೆ ತೊಟ್ಟ ಆಕರ್ಷಕ ವ್ಯಕ್ತಿ ಎನ್ನುವುದಕ್ಕಿಂತ ಅಪರೂಪದ ರಾಜಕಾರಣಿ. ಸಿರವಾಳ ಕುಟುಂಬಕ್ಕೆ ರಾಜಕೀಯ ಬದುಕು ಗಟ್ಟಿಯಾಗಲಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುವ ಗುರುಪಾಟೀಲರಿಗೆ ಮಠಾಧೀಶರು, ಹಿತೈಷಿಗಳು ಬೆಂಬಲಿಸಿ ಎಂದು ಸೂಚ್ಯವಾಗಿ ಅಬ್ಬೆ ತುಮಕೂರಿನ ಸಿದ್ಧಸಂಸ್ಥಾನ ಮಠದ ಗಂಗಾಧರ ಸ್ವಾಮೀಜಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಕಡಕೊಳದ ರುದ್ರಮುನಿ ಶಿವಾಚಾರ್ಯರು, ಫಕೀರೇಶ್ವರಮಠದ ಗುರುಪಾದ ಸ್ವಾಮೀಜಿ, ಚರಬಸವೇಶ್ವರ ಸಂಸ್ಥಾನದ ವೇದಮೂರ್ತಿ ಬಸವಯ್ಯ ಶರಣರು, ಏಕದಂಡಿಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಸಿದ್ದೇಶ್ವರ ಶಿವಾಚಾರ್ಯರು, ಸೂಗೂರೇಶ್ವರ ದೇವರು, ಅನ್ನದಾನಯ್ಯ ಸ್ವಾಮೀಜಿ, ಬಸವರಾಜ ಶಾಸ್ತ್ರಿಗಳು, ದೋರನಹಳ್ಳಿಯ ವೀರಮಹಾಂತ ಶಿವಾಚಾರ್ಯರು, ಸಿದ್ರಾಮಯ್ಯ ಸ್ವಾಮೀಜಿ, ಕಬೀರ ಸಿದ್ದ ಸ್ವಾಮೀಜಿ, ಚನ್ನಯ್ಯಸ್ವಾಮಿ ಕಲ್ಲೂರ, ಸಗರ ಶ್ರೀಗಳು, ಚನ್ನಮಲ್ಲ ದೇವರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಮಾಜದ ಮುಖಂಡರಾದ ಬಸಣ್ಣ ಬೂದನೂರ, ಶಿವಣ್ಣ ಇಜೇರಿ, ಬಿ.ಪಿ.ಹಳ್ಳೂರ, ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿಸಾಹು, ಡಾ.ಮಲ್ಲಣ್ಣಗೌಡ ಉಕ್ಕನಾಳ, ಸಾಹೇಬಗೌಡ ಬಿಳ್ವಾರ, ಇಸ್ಮಾಯಿಲ್ ಚೌದ್ರಿ,ಯಲ್ಲಯ್ಯ ನಾಯಕ ವನದುರ್ಗ, ರಾಮಚಂದ್ರ ಕಾಶಿರಾಜ, ಗುರು ಕಾಮಾ, ವಸಂತ ಸುರಪುರಕರ್, ಮನೋಹರ ಅಲಬನೂರ,
ದೇವೀಂದ್ರ ತೊಟಗೇರ, ಅತಿಕ ಸಿದ್ದಕಿ, ನೀಲಕಂಠ ಬಡಿಗೇರ, ಭೀಮರಾಯ ಬಾರಿಗಿಡ, ರಾಜುಗೌಡ ಉಕ್ಕನಾಳ, ತ್ರಿಶೂಲ ಹವಾಲ್ದಾರ, ಮಲ್ಲಿಕಾರ್ಜುನ ಅಂಗಡಿ, ಅಶೋಕ ಮಲ್ಲಾಬಾದಿ, ಈರಣ್ಣಗೌಡ ಮಲ್ಲಾಬಾದಿ, ತಾಲ್ಲೂಕು ಬಣಜಿಗ ಸಮಾಜದ ಅಧ್ಯಕ್ಷ ಡಾ.ಚಂದ್ರಶೇಖರ ಸುಬೇದಾರ, ಡಾ.ಎಸ್.ಆರ್.ಸಿಣ್ಣೂರ, ಭೀಮಯ್ಯ ಕಟ್ಟಿಮನಿ, ಲಿಂಗಣ್ಣ ಪಡಶೆಟ್ಟಿ, ಲಾಲ ಅಹ್ಮದ ಖುರೇಶಿ, ಚಂದ್ರಶೇಖರ ಮರಕಲ್, ರುದ್ರಪ್ಪ ಚಟ್ರಿಕಿ, ಎಸ್.ಶೇಖರ ದೊರೆ, ವೆಂಕಟೇಶ ಆಲ್ದಾಳ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ದಿ. ಶಿವಶೇಖರಪ್ಪಗೌಡ ಪಾಟೀಲ್ರ ಭಾವಚಿತ್ರ ಹೊತ್ತ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.